ಯಾರು ಬೇಕಾದರು ಎಷ್ಟೇ ಶ್ರೀಮಂತರಾಗಿ ಇರಬಹುದು. ಆದರೆ, ಜಗತ್ತಿನಲ್ಲಿರುವ ಯಾವ ವ್ಯಕ್ತಿಯು ಕಳೆದು ಹೋದ ದಿನವನ್ನು ಮರಳಿ ಪಡೆಯುವಷ್ಟು ಶ್ರೀಮಂತನಲ್ಲ. ಅದಕ್ಕಾಗಿ ಭಗವಂತನು ಮನುಷ್ಯನಿಗೆ ಬದುಕನ್ನು ನೀಡಿದ್ದಾನೆ. ಅದರ ಸಾರ್ಥಕತೆ ಮಾಡಿಕೊಳ್ಳಬೇಕು.
ಬದುಕಿರುವರೆಗೂ ಪರರಿಗೂ ಸಹಾಯ ಮಾಡುತ್ತ ಒಳ್ಳೆಯ ವ್ಯಕ್ತಿಯಾಗಿ ಜೀವನ ಮಾಡಬೇಕು. ನಮ್ಮ ಶರಣರು ಪರಹಿತವ ಮಾಡುತ್ತಾ ತಮ್ಮ ಜೀವನದುದ್ದಕ್ಕೂ ಪರಹಿತಕ್ಕಾಗಿಯೇ ಬದುಕಿ ಬಾಳಿ ಸಂತೋಷ ಪಟ್ಟಿದ್ದಾರೆ. ದೇವರು ಕರುಣಿಸಿರುವ ತನು ಮನ ಬುದ್ಧಿಯನ್ನು ಬೆಳೆಸಿಕೊಂಡು ಸತ್ಕಾರ್ಯ ಮಾಡಿ ಸಂತೋಷ ಪಡಬೇಕು. ಹಸಿದವರಿಗೆ ಅನ್ನ, ಒಂದಿಷ್ಟು ಒಳ್ಳೆಯ ಮಾತು ಸಾಕು. ನೆರೆ, ಹೊರೆಯವರ ಮನಸ್ಸನ್ನು ಹೂವಿನಂತೆ ಅರಳಿಸಿ ನಮ್ಮ ಸುತ್ತ ಮುತ್ತ ಸ್ವರ್ಗವನ್ನು ನಿರ್ಮಾಣ ಮಾಡಬಹುದು.
ಆದರೆ, ಸ್ವಾರ್ಥಭಾವದಿಂದ ಬದುಕುತ್ತಿರುವ ಮನುಷ್ಯನು ತಾನು ಗಳಿಸಿರುವ ಸಂಪತ್ತನ್ನು, ದವಸ ಧಾನ್ಯಗಳನ್ನು ತಾನೊಬ್ಬನೇ ಅನುಭವಿಸುತ್ತಿದ್ದಾನೆ. ಪರಹಿತ ಪರೋಪಕಾರಕ್ಕಾಗಿ ಬಳಸಬೇಕೆಂಬುದನ್ನು ಮರೆತು ವ್ಯರ್ಥ ಬದುಕು ಸಾಗಿಸುತ್ತಿದ್ದಾನೆ. ಯಾವಾಗ ಸ್ವಾರ್ಥ ಮರೆತು ಪರಹಿತಕ್ಕಾಗಿ ಬದುಕುತ್ತಾನೋ ಆಗ ಮಾತ್ರ ಅವನು ಆತ್ಮ ಸಂತೃಪ್ತಿ ಹೊಂದುತ್ತಾನೆ.
‘ಪರೋಪಕಾರಾಯ ಫಲಂತಿ ವೃಕ್ಷಃ ಪರೋಪಕಾರಾಯ ವಹಂತಿ ನದ್ಯಃ ಪರೋಪಕಾರಾಯ ದುಹಂತಿದಾವ್ಯಾಃ ಪರೋಪಕಾರ್ಥಮಿದಂ ಶರೀರಮ್‘
ಪರೋಪಕಾರಕ್ಕಾಗಿ ಮರಗಳು ಹಣ್ಣು ಕೊಡುತ್ತವೆ, ಪರೋಪಕಾರಕ್ಕಾಗಿ ನದಿಗಳು ಹರಿಯುತ್ತವೆ, ಪರರ ಉಪಕಾರಕ್ಕಾಗಿ ಹಸುಗಳು ಹಾಲು ಕೊಡುತ್ತವೆ. ಹಾಗೆಯೇ, ಪರಮಾತ್ಮ ಕೊಟ್ಟ ಈ ಶರೀರ ಪರೋಪಕಾರಕ್ಕಾಗಿಯೇ ಇರುವುದು ಎಂದು ತಿಳಿದು ಜೀವನ ಮಾಡಿದಾಗ ಜೀವನ ಪಾವನವಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.