ADVERTISEMENT

ಅಂಧರ ಸಂಖ್ಯೆ ಹೆಚ್ಚಳ ಆತಂಕಕಾರಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 19:30 IST
Last Updated 13 ಅಕ್ಟೋಬರ್ 2011, 19:30 IST

ಬಾಗಲಕೋಟೆ: ಜಗತ್ತಿನ ಜನಸಂಖ್ಯೆ ಹೆಚ್ಚುತ್ತಿರುವಂತೆಯೇ ವಿವಿಧ ಕಾರಣಗಳಿಂದ ಅಂಧತ್ವಕ್ಕೆ ಗುರಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜಗತ್ತಿನಾದ್ಯಂತ ಸುಮಾರು 284 ದಶಲಕ್ಷ ಜನರು  ಅಂಧತ್ವದಿಂದ ಬಳಲುತ್ತಿದ್ದಾರೆ ಎಂದು ಬಸವ ಜ್ಯೋತಿ ನೇತ್ರಾಲಯದ ವೈದ್ಯ ಡಾ.ರಾಜಶೇಖರ ಪಾಟೀಲ ಕಳವಳ ವ್ಯಕ್ತಪಡಿಸಿದರು.

ನಗರದ ಬಸವಜ್ಯೋತಿ ನೇತ್ರಾಲಯ ಮತ್ತು ಧನುಷ್ ಶಿಕ್ಷಣ ಸಂಸ್ಥೆಯ ಎ.ವಿ. ನರ್ಸಿಂಗ್ ಕಾಲೇಜಿನ   ಆಶ್ರಯದಲ್ಲಿ ಗುರುವಾರ  `ವಿಶ್ವ ದೃಷ್ಟಿ ದಿನ~ ಅಂಗವಾಗಿ  ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

 ಈ ಅಂಧತ್ವಕ್ಕೆ ಕಣ್ಣಿನ ಪೊರೆಯಲ್ಲದೇ, ಕರಿಗುಡ್ಡೆಯ ತೊಂದರೆಗಳು, ಮಧುಮೇಹದಿಂದುಂಟಾಗುವ ಅಕ್ಷಿಪಟಲದ ತೊಂದರೆ, ಮೆಳ್ಳಗಣ್ಣು ಮತ್ತು ಅವಧಿ ಮುನ್ನ ಜನಿಸಿದ ನವಜಾತ ಶಿಶುಗಳ ಕಣ್ಣಿನ ತೊಂದರೆಯಿಂದ ಅಂಧತ್ವ ಉಂಟಾಗುತ್ತದೆ ಎಂದು ಹೇಳಿದರು.
 
ಬಸವೇಶ್ವರ ವೃತ್ತದಿಂದ ಜಾಥಾ ಆರಂಭವಾಗಿ ವಲ್ಲಭಭಾಯಿ ವೃತ್ತದ ಮೂಲಕ ಹಳೇ ಐ.ಬಿ. ರಸ್ತೆಯ ಮುಖಾಂತರ  ಬಸವಜ್ಯೋತಿ ನೇತ್ರಾಲಯಕ್ಕೆ ಆಗಮಿಸಿತು.  ಎ.ವಿ. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರಕಾಶ ಹಾಲವರ, ಪರಶುರಾಮ ಸಂಗಮ, ಸಂತೋಷ ಕೋರಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.