ಆಲ್ದೂರು (ಚಿಕ್ಕಮಗಳೂರು): ಪಟ್ಟಣದ ಹಳೆ ಫಾರೆಸ್ಟ್ಗೇಟ್ ಬಳಿ ಅಂಬೇಡ್ಕರ್ ವೃತ್ತ ನಿರ್ಮಿಸಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ಹೋರಾಟ ವೇದಿಕೆ ನೇತೃತ್ವದಲ್ಲಿ ವಿವಿಧ ಪಕ್ಷ ಮತ್ತು ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಗಾಳಿಗಂಡಿಯ ಬಿಸಿಎಂ ಹಾಸ್ಟೆಲ್ ಆವರಣದಿಂದ ಹೊರಟ ಮೆರವಣಿಗೆ ಮುಖ್ಯ ಬೀದಿಯಲ್ಲಿ ಸಂಚರಿಸಿ ಬಸ್ನಿಲ್ದಾಣ ಆವರಣ ತಲುಪಿತು. ಮೆರವಣಿಗೆಯಲ್ಲಿ ಜೆಎಸ್ಎಸ್ ಕಲಾತಂಡದೊಂದಿಗೆ ಹೆಜ್ಜೆ ಹಾಕಿದ ಪ್ರತಿಭಟನಾನಿರತರು, ಪಂಚಾ ಯಿತಿ ನಿರ್ಣಯ ಕಾರ್ಯರೂಪಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಆಲ್ದೂರು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಅಮಾಯಕರ ಮೇಲೆ ಹೂಡಿರುವ ಮೊಕದ್ದಮೆ ಹಿಂಪಡೆಯಬೇಕು. ಸಾರ್ವಜನಿಕ ಆಸ್ತಿ ಹಾನಿ ಮಾಡಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಅಂಬೇಡ್ಕರ್ ಗೌರವಿಸದ ಜನ ದೇಶ ಗೌರವಿಸಲಾರರು. ಅಂಬೇಡ್ಕರ್ ವೃತ್ತ ನಿರ್ಮಿಸಲು ಪಂಚಾಯಿತಿ ಮುಂದಾಗಬೇಕೆಂದು ಒತ್ತಾಯಿಸಿದರು.
ಬಿಎಸ್ಪಿ ಜಿಲ್ಲಾ ಘಟಕ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ ಅವರೂ ಮಾತನಾಡಿದರು. ದ.ಸಂ.ಸ. ಜಿಲ್ಲಾ ಸಂಘಟನಾ ಸಂಚಾಲಕ ಯಲುಗುಡಿಗೆ ಹೊನ್ನಪ್ಪ, ಕೆ.ಪಿ. ರಾಜರತ್ನಂ, ಸಿಪಿಐ ಮುಖಂಡ ಸಾತಿ ಸುಂದರೇಶ್, ಜಿ.ಪಂ. ಸದಸ್ಯ ಅನಂತ್, ಕಠಾರದಹಳ್ಳಿ ನವರಾಜ್, ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ಐ.ಎಂ.ಪೂಣೇಶ್, ವೇದಿಕೆ ಮುಖಂಡರಾದ ಮಂಜು, ಕಠಾರದಹಳ್ಳಿ ಗಣೇಶ್, ಹುಣಸೇ ಮಕ್ಕಿ ಲಕ್ಷ್ಮಣ್, ಜೆಡಿಯು ಜಿಲ್ಲಾ ಅಧ್ಯಕ್ಷ ಕೆ.ಭರತ್, ಹೆಡದಾಳ್ ಕುಮಾರ್, ಕೂದುವಳ್ಳಿ ಪಂಚಾಯಿತಿ ಅಧ್ಯಕ್ಷ ಕೆ.ಎಚ್.ಕೃಷ್ಣಪ್ರಸಾದ್, ಜಿಪಂ ಮಾಜಿ ಸದಸ್ಯ ಸತೀಶ್ ಇನ್ನಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.