ADVERTISEMENT

ಅನ್ಯಾಯ ವಿರುದ್ಧ ಹೋರಾಡಿ- ಎಚ್ಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 18:30 IST
Last Updated 19 ಫೆಬ್ರುವರಿ 2011, 18:30 IST

ಯಲಬುರ್ಗಾ: ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸುವ ಮೂಲಕ ರಾಜ್ಯಕ್ಕೆ ಆಗುವ ಅತ್ಯಲ್ಪ ಲಾಭಕ್ಕೆ ತೃಪ್ತಿ ಪಟ್ಟಂತಿರುವ ರಾಜ್ಯ ಸರ್ಕಾರ, ತೀರ್ಪಿನಿಂದಾದ ನಷ್ಟದ ಬಗ್ಗೆ ತೋರಿದ ನಿರ್ಲಕ್ಷ್ಯದ ಬಗ್ಗೆ ನಾಡಿನ ಜನತೆ ಎಚ್ಚೆತ್ತುಕೊಳ್ಳದೆ ಹೋದರೆ ನಾವು ನಮ್ಮತನವನ್ನೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಪಟ್ಟಣದಲ್ಲಿ ಶನಿವಾರ ಕೃಷ್ಣಾ ಬಿ ಸ್ಕೀಂ ಯೋಜನೆಯ ಸಾಧಕ-ಬಾಧಕ ಕುರಿತ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಕೃಷ್ಣಾ ನದಿ ಕಣಿವೆಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರದೇಶ ಕರ್ನಾಟಕ ರಾಜ್ಯಕ್ಕೆ ಸೇರಿದೆ, ಅಲ್ಲದೆ ಬರಗಾಲ ಪ್ರದೇಶ,ಹೆಚ್ಚು ಕೃಷಿ ಚಟುವಟಿಕೆ ನಡೆಯುವಂಥ ಪ್ರದೇಶ ಜೊತೆಗೆ ಅತ್ಯಂತ ಹಿಂದುಳಿದ ಪ್ರದೇಶ ಎಂದೇ ಗುರುತಿಸಲ್ಪಟ್ಟಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ನೀರು ಹಂಚಿಕೆಯಾಗಬೇಕಾದುದು ನ್ಯಾಯ ಸಮ್ಮತ. ಆದರೆ ವ್ಯತಿರಿಕ್ತವಾಗಿ ಬಂದ ತೀರ್ಪಿನ ವಾಸ್ತವವನ್ನು ಅರಿಯದೇ ರಾಜ್ಯ ಸರ್ಕಾರ ತೃಪ್ತಿಯಾಗಿದೆ ಎಂದು ಹೇಳಿ ಸಿಹಿ ಹಂಚಿ ಪಟಾಕಿ ಸುಟ್ಟಿದ್ದು ಖೇದದ ಸಂಗತಿ ಎಂದರು.

ಕರ್ನಾಟಕ ತನ್ನ ನೀರಾವರಿ ಯೋಜನೆಗಳನ್ನು ಕಾನೂನು ಬದ್ಧವಾಗಿ ಅನುಮೋದನೆ ಪಡೆದು ನಿರ್ಮಿಸಿ ಕೊಂಡಿದೆ.ಆದರೆ ಆಂಧ್ರ ಕಾನೂನು ಬಾಹಿರವಾಗಿ ಅನುಷ್ಠಾನಕ್ಕೆ ತಂದಿದ್ದರ ಬಗ್ಗೆ ಚಕಾರ ಎತ್ತದಿರುವುದು ಆಕ್ಷೇಪಾರ್ಹ ಎಂದು ಹೇಳಿದರು.

ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಹಸನಸಾಬ ದೋಟಿಹಾಳ,ಜಿ.ಎಸ್.ಪಾಟೀಲ್, ಶಾಸಕ ಅಮರೇಗೌಡ ಬಯ್ಯಾಪೂರ, ಪಿ.ಕೊದಂಡರಾಮಯ್ಯ ನೀರಾವರಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಕ್ಯಾಪ್ಟನ್ ರಾಜಾರಾವ್, ಜಿಪಂ ಸದಸ್ಯ ರಾಘವೇಂದ್ರ ಹಿಟ್ನಾಳ, ಕಾಂಗ್ರೆಸ್ ಅಧ್ಯಕ್ಷ ಹನಮಂತಗೌಡ ಪಾಟೀಲ್, ಭೀಮೇಶಪ್ಪ ಹಳ್ಳಿ ಇತರರು  ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.