ADVERTISEMENT

ಅಭಿಮಾನಿಗೆ ಶಿವರಾಜ್‌ಕುಮಾರ್ ನೆರವು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 19:30 IST
Last Updated 1 ಆಗಸ್ಟ್ 2012, 19:30 IST

ಹುಬ್ಬಳ್ಳಿ: ನಗರದ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಅಭಿಮಾನಿ ಮಡಿವಾಳಪ್ಪ ಅಜ್ಜಳ ಅವರನ್ನು ಚಿತ್ರನಟ ಶಿವರಾಜ್‌ಕುಮಾರ್ ಬುಧವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಹೆಗ್ಗೇರಿಯ ಮಾರುತಿ ನಗರದ ಮಡಿವಾಳಪ್ಪ ವೃತ್ತಿಯಲ್ಲಿ ಪೇಯಿಂಟರ್ ಆಗಿದ್ದು, ಸುಮಾರು ಏಳು ವರ್ಷಗಳ ಹಿಂದೆ ಗಬ್ಬೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಜಾರಿ ಬಿದ್ದು ಸೊಂಟ ಮುರಿದುಕೊಂಡಿದ್ದರು.

 ಅಂದಿನಿಂದಲೂ ನಡೆಯಲಾಗದ ಸ್ಥಿತಿಯಲ್ಲಿರುವ ಈ ಅಭಿಮಾನಿಯ ಬಗ್ಗೆ ತಿಳಿದ ಶಿವರಾಜ್‌ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದರು.

`ಇಂತಹ ಅಭಿಮಾನಿಗಳನ್ನು ಪಡೆಯುವುದು ನನ್ನ ಅದೃಷ್ಟ. ವಿಷಯ ಮೊದಲೇ ತಿಳಿದಿದ್ದರೆ ಇನ್ನಷ್ಟು ನೆರವು ನೀಡಬಹುದಿತ್ತು. ಇನ್ನಾದರೂ ಈತ ಗುಣಮುಖನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ಮಗನ ಶಿಕ್ಷಣ ಸೇರಿದಂತೆ ಅಗತ್ಯವಾದ ನೆರವು ನೀಡುತ್ತೇನೆ. ಮಡಿವಾಳಪ್ಪ ಅವರ ಆರೋಗ್ಯ ಸ್ಥಿತಿ ಕುರಿತು ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯಬಿದ್ದಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗುವುದು ಎಂದರು.

ಚಿತ್ರರಂಗದಲ್ಲಿನ ಈಚಿನ ವಾದಗಳ ಕುರಿತು ಪ್ರತಿಕ್ರಿಯಿಸಿದ ಶಿವರಾಜ್‌ಕುಮಾರ್, ಪ್ರತಿಯೊಬ್ಬರು ಇನ್ನೊಬ್ಬರ ಬಗ್ಗೆ ಒಳ್ಳೆಯ ಭಾವನೆ ಹೊಂದುವುದು ಅಗತ್ಯ. ತಮ್ಮ ವಿರುದ್ಧ ಆರೋಪ ಮಾಡಿರುವವರನ್ನು ಕ್ಷಮಿಸುವುದನ್ನು ಬಿಟ್ಟು ಬೇರೇನು ಮಾಡಲಾಗದು ಎಂದರು.

 `ಶಿವ~ ಚಿತ್ರ ಶೀಘ್ರ ತೆರೆಕಾಣಲಿದ್ದು, ಬಹುನಿರೀಕ್ಷೆಯ ಚಿತ್ರ ಇದಾಗಿದೆ ಎಂದರು.

ನೋವಿನಲ್ಲೂ ತಮ್ಮ ನೆಚ್ಚಿನ ನಟನನ್ನು ಕಂಡ ಖುಷಿ ಹಂಚಿಕೊಂಡ ಮಡಿವಾಳಪ್ಪ `ಸಾಕ್ಷಾತ್ ದೇವರನ್ನು ನೋಡಿದಂತಾಗಿದೆ~ ಎಂದು ಭಾವುಕರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.