ADVERTISEMENT

ಅಸಮರ್ಪಕ ವಿದ್ಯುತ್: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 19:30 IST
Last Updated 22 ಅಕ್ಟೋಬರ್ 2011, 19:30 IST
ಅಸಮರ್ಪಕ ವಿದ್ಯುತ್: ಪ್ರತಿಭಟನೆ
ಅಸಮರ್ಪಕ ವಿದ್ಯುತ್: ಪ್ರತಿಭಟನೆ   

ಚಿತ್ರದುರ್ಗ: ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.ನೀಲಕಂಠೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮುಖಂಡರು, ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬಿಜೆಪಿ ದುರಾಡಳಿತದಿಂದಾಗಿ ರಾಜ್ಯ ಕಗ್ಗತ್ತಲಲ್ಲಿ ಮುಳುಗಿದೆ. ಸರ್ಕಾರದ ದೂರದೃಷ್ಟಿ ಕೊರತೆ, ನಿಷ್ಕ್ರಿಯತೆ, ಆಂತರಿಕ ಕಲಹ ಮತ್ತು ಆಡಳಿತ ವೈಫಲ್ಯದಿಂದಾಗಿ ವಿದ್ಯುತ್ ಅಭಾವ ಉಂಟಾಗಿದ್ದು, ಜನಜೀವನ ತಲ್ಲಣಗೊಂಡಿದೆ ಎಂದು ಮುಖಂಡರು ಆರೋಪಿಸಿದರು.

ಜಿಲ್ಲೆಯಲ್ಲಿರುವ ಗಾಳಿಯಂತ್ರಗಳಿಂದ ಅಂದಾಜು 100 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಅಲ್ಪ ವಿದ್ಯುತ್‌ಅನ್ನು ಸ್ಥಳೀಯವಾಗಿ ಜಿಲ್ಲೆಯಲ್ಲಿ ಬಳಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, ಮೇವು, ಕುಡಿಯುವ ನೀರು ಇತ್ಯಾದಿ ಸೌಲಭ್ಯಗಳನ್ನು ಒದಗಿಸುವಲ್ಲಿ ಬಿಜೆಪಿ ಸರ್ಕಾರ ಇದುವರೆಗೆ ಯಾವುದೇ ದಿಟ್ಟ ಹಾಗೂ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು.

ಜ್ಲ್ಲಿಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎ. ಸೇತುರಾಮ್, ಮುಖಂಡರಾದ ಜಿ.ಎಸ್. ಮಂಜುನಾಥ್, ಸಂಪತ್‌ಕುಮಾರ್, ಅಲ್ಲಾಬಕ್ಷ್, ಡಿ.ಎನ್. ಮೈಲಾರಪ್ಪ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.