ದಾವಣಗೆರೆ: ನಾವೂ ಪಡಿತರ ಚೀಟಿ ಹೊಂದಬೇಕು. ರಿಯಾಯಿತಿ ದರದಲ್ಲಿ ಪಡಿತರ ಪಡೆಯಬೇಕು ಎಂಬ ಬಡಜನರ ಬಯಕೆ ಸದ್ಯಕ್ಕೆ ಈಡೇರುವ ಲಕ್ಷಣವಿಲ್ಲ. ಕೇವಲ ಮಾಹಿತಿ ಸಂಗ್ರಹಣೆಯಲ್ಲಿಯೇ ಸರ್ಕಾರ ಕಾಲಹರಣ ಮಾಡುತ್ತಿರುವುದು ಇದಕ್ಕೆ ಕಾರಣ.
ಪಡಿತರ ಚೀಟಿ ಪಡೆಯಲು ಕಳೆದ ನ. 19ರಿಂದ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಹೊಸ ವ್ಯವಸ್ಥೆ ಜಾರಿಗೊಳಿಸಿದೆ. ಅಕ್ರಮ ಪಡಿತರ ಚೀಟಿಗಳಿಗೆ `ಕತ್ತರಿ~ ಹಾಕುವುದು ಹಾಗೂ ಸೌಲಭ್ಯ ಅನರ್ಹರ ಪಾಲಾಗದಂತೆ ನೋಡಿಕೊಳ್ಳುವ ಉದ್ದೇಶ ಸರ್ಕಾರದ್ದು. ಆದರೆ, ಈ ವ್ಯವಸ್ಥೆ ಜಾರಿಯಾಗಿ ಮೂರು ತಿಂಗಳು ಸಮೀಪಿಸುತ್ತಿದ್ದರೂ ಪಡಿತರ ಚೀಟಿ ವಿತರಣೆ ಕಾರ್ಯ ಆರಂಭವಾಗಿಲ್ಲ.
ರಾಜ್ಯದಲ್ಲಿರುವ ಕುಟುಂಬಗಳ ಸಂಖ್ಯೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪಡಿತರ ಚೀಟಿ ವಿತರಿಸಲಾಗಿತ್ತು. ಈ `ಲೋಪ~ ಪತ್ತೆಗಾಗಿ, 2010ರಿಂದ ಹೊಸದಾಗಿ ಪಡಿತರ ಚೀಟಿ ವಿತರಣೆ ಸ್ಥಗಿತಗೊಳಿಸಲಾಗಿತ್ತು. ವರ್ಷದ ನಂತರ, 2011ರ ನವೆಂಬರ್ನಲ್ಲಿ ಆನ್ಲೈನ್ನಲ್ಲಿ ಅರ್ಜಿ ಸ್ವೀಕಾರ ಪುನರಾರಂಭ ಆಗಿದೆ. ಇಲಾಖೆ ಮೂಲಗಳ ಪ್ರಕಾರ, ಹೊಸದಾಗಿ ಪಡಿತರ ಚೀಟಿ ಕೋರಿ ಪ್ರತಿ ಜಿಲ್ಲೆಯಲ್ಲಿಯೂ ಸರಾಸರಿ 50 ಸಾವಿರಕ್ಕೂ ಹೆಚ್ಚು ಅರ್ಜಿ ಬಂದಿವೆ. ಯಾವಾಗ ಪಡಿತರ ಚೀಟಿ ದೊರೆಯುತ್ತದೆ ಎಂಬ ಸ್ಪಷ್ಟ ಮಾಹಿತಿ ಇದುವರೆಗೂ ಇಲ್ಲ.
`ತಾಲ್ಲೂಕು ಕೇಂದ್ರದಲ್ಲಿ ಫ್ರಾಂಚೈಸಿ ನೇಮಕದಿಂದ ಜನರಿಗೆ ಅನುಕೂಲವಿದೆ. ಅಲ್ಲಿ ನಿರಂತರವಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. ಪ್ರಾಂಚೈಸಿಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಕೆಲ ತಾಲ್ಲೂಕುಗಳಿಂದ ಅರ್ಜಿ ಬಂದಿಲ್ಲ. ಫ್ರಾಂಚೈಸಿ ನಿಗದಿಯಾದ ಕೆಲ ವಾರಗಳಲ್ಲಿ ಪಡಿತರ ಚೀಟಿ ದೊರೆಯುವ ಸಾಧ್ಯತೆ ಇದೆ~ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ `ಪ್ರಜಾವಾಣಿ~ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.