ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್ಟಿಪಿಎಸ್) 250 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಕೂಲಿಂಗ್ ಟವರ್ ಬಳಿ ಇರುವ ಪೈಪ್ ಮೂಲಕ ನೀರು ಪೋಲಾಗುತ್ತಿದ್ದರೂ ಆಡಳಿತ ಮಂಡಳಿ ಅಧಿಕಾರಿಗಳು ಅದನ್ನು ತಡೆಯಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ.
‘ಸ್ಥಾವರದ ಎಂಟನೇ ಘಟಕದ ಕೂಲಿಂಗ್ ಟವರ್ನ ಒಳ ಆವರಣ ದಿಂದ ಬರುವ ನೀರು ಹೊರಗಡೆ ಮುಂಭಾಗದ ಎಸಿಸಿ ಗೇಟ್ವರೆಗೆ ನೀರು ಹರಿಯುತ್ತಿದೆ. ಅಲ್ಲದೆ ಈ ನೀರು ಶಿಲ್ಪಾ ಮೆಡಿಕೇರ್ ಕಂಪೆನಿ ಬಳಿಯ ಕಾಲುವೆ ಮೂಲಕ ಹಾದು ಹೋಗುತ್ತಿದೆ.
ಅದಕ್ಕೆ ಕಂಪೆನಿ ಹೊರಬಿಡುವ ರಸಾಯನಿಕ ತ್ಯಾಜ್ಯ ನೀರು ಮಿಶ್ರಣಗೊಳ್ಳುತ್ತದೆ. ಆ ನೀರು ಹೆಗ್ಗಸನಹಳ್ಳಿ ಹಳ್ಳಕ್ಕೆ ಸೇರುತ್ತಿದೆ. ಅದನ್ನು ಜನ ಜಾನುವಾರುಗಳು ಕುಡಿದರೆ ಅಪಾಯವಾಗುವ ಸಾಧ್ಯತೆ ಇದೆ’ ಎಂದು ಸ್ಥಳೀಯ ನಿವಾಸಿ ಸುರೇಶ ಮಡಿವಾಳ ಆರೋಪಿಸಿದರು.
ದೇವಸೂಗೂರಿನ ಯಂಕಣ್ಣ ಯಾದವ ನಗರ ಹಾಗೂ ಬೇವಿನ ಬೆಂಚಿ ಮಾರ್ಗದ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದರು. ಸಮಸ್ಯೆಯನ್ನು ಇದನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.