ADVERTISEMENT

ಆಶ್ರಯ ಮನೆಗಳಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ತುಮಕೂರು: ನಗರದ ಎಲ್ಲ ಕೊಳಗೇರಿ ನಿವಾಸಿಗಳಿಗೆ ಆಶ್ರಯ ಮನೆ ನೀಡುವಂತೆ ಆಗ್ರಹಿಸಿ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಮಹಾನಗರ ಪಾಲಿಕೆ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಈಗಾಗಲೇ ಸಮೀಕ್ಷೆ ಮಾಡಲಾಗಿರುವ ಬೆಳಗುಂಬ ರಸ್ತೆ, ಶಾಂತಿ ಹೋಟೆಲ್ ಹಿಂಭಾಗ, ಇಸ್ಮಾಯಲ್ ನಗರ, ಬಂಡೆಪಾಳ್ಯ ರಸ್ತೆ, ಮರಳೂರು ದಿಣ್ಣೆ, ರಂಗಮಂದಿರ ಹಿಂಭಾಗದಲ್ಲಿರುವ ಕೊಳಗೇರಿ ನಿವಾಸಿಗಳಿಗೆ ಆಶ್ರಯ ಮನೆ ನೀಡಬೇಕು. ಜಿಲ್ಲಾಡಳಿತ ಸಮೀಕ್ಷೆ ನಡೆಸಿರುವ ಪ್ರಕಾರ 325 ಕುಟುಂಬಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ನಗರಪಾಲಿಕೆ ಆಯುಕ್ತ ಜಯವಿಭವ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಕಳೆದ 18 ವರ್ಷಗಳಿಂದ ಸ್ಲಂ ನಿವಾಸಿಗಳಿಗೆ ಆಶ್ರಯ ಮನೆ ವಿತರಿಸಿಲ್ಲ. ಕೊಳಗೇರಿ ನಿವಾಸಿಗಳ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದ್ದು, ಸ್ಲಂ ಜನರನ್ನು ನಿರ್ಲಕ್ಷಿಸಲಾಗುತ್ತಿದೆ. ಈಗಲಾದರೂ ಮನೆ ನೀಡದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ಸೈಯದ್‌ಅಲ್ತಾಫ್ ಆಗ್ರಹಿಸಿದರು.

ಕಾರ್ಮಿಕ ಮುಖಂಡ ಸೈಯದ್‌ಮುಜೀಬ್, ರೈತ ಮುಖಂಡ ಬಿ.ಉಮೇಶ್, ಡಿವೈಎಫ್‌ಐನ ಎನ್.ಕೆ.ಸುಬ್ರಹ್ಮಣ್ಯ, ಮುಖಂಡರಾದ ರಾಘವೇಂದ್ರ, ಗೋವಿಂದಮ್ಮ, ಶೆಟ್ಟಳಯ್ಯ, ಲಕ್ಷ್ಮೀಪತಿ, ಸುಬ್ಬು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.