ಶಿವಮೊಗ್ಗ: ವಿದ್ಯಾರ್ಥಿಗಳ ಮನಸ್ಥಿತಿ, ಆಸಕ್ತಿ, ಅನುಕೂಲಕ್ಕೆ ತಕ್ಕಂತೆ ಪಠ್ಯಪುಸ್ತಕ ರಚನೆಯಾಗಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ. ಬಾರಿ ತಿಳಿಸಿದರು.
ನಗರದ ಎಟಿಎನ್ಸಿ ಸಭಾಂಗಣದಲ್ಲಿ ಮಂಗಳವಾರ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಹಮ್ಮಿಕೊಂಡಿದ್ದ `ಕನ್ನಡ ಪಠ್ಯ ಪುಸ್ತಕಗಳ ಬಿಡುಗಡೆ ಹಾಗೂ ಕಾರ್ಯಾಗಾರ~ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಇಂತಹದೇ ಪುಸ್ತಕ ಓದಬೇಕು ಎಂಬ ವ್ಯವಸ್ಥೆ ಬದಲಾಗಿ ಅವರ ಆಸಕ್ತಿ ಅಭಿರುಚಿಗೆ, ಅನುಕೂಲಕ್ಕೆ ತಕ್ಕಂತೆ ಪಠ್ಯಪುಸ್ತಕ ರಚನೆ ಮಾಡುವ ನಿಟ್ಟಿನಲ್ಲಿ ಕುವೆಂಪು ವಿಶ್ವವಿದ್ಯಾಲಯ ಪ್ರಸಾರಾಂಗ ದಿಟ್ಟಹೆಜ್ಜೆ ಇಟ್ಟಿದೆ. ನಮ್ಮದೇ ಪ್ರಸಾರಾಂಗದಿಂದ ಆಗುವ ಎರಡು ಲಾಭಗಳೆಂದರೆ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಪಠ್ಯಪುಸ್ತಕ ಹಾಗೂ ಹಣದ ಉಳಿತಾಯವಾಗುತ್ತದೆ ಎಂದರು.
ಕನ್ನಡ ಭಾರತಿ ನಿರ್ದೇಶಕ ಪ್ರೊ.ಸಣ್ಣರಾಮ ಮಾತನಾಡಿ, ಹಳೆಯ ಪಠ್ಯ, ಹೊಸ ವಿಚಾರಗಳ ಸಮ್ಮಿಲನದ ಪಠ್ಯಗಳು ಹೊರತರಬೇಕಾಗಿದೆ ಎಂದರು.
ಕುವೆಂಪು ವಿವಿ ಪ್ರಸಾರಾಂಗದ ನಿರ್ದೇಶಕ ಡಾ.ಜಿ. ಪ್ರಶಾಂತ ನಾಯಕ್, ಎನ್ಇಎಸ್ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಎಟಿಎನ್ಸಿ ಕಾಲೇಜು ಪ್ರಾಂಶುಪಾಲ ಎಚ್.ಎ. ನಾಗರಾಜ್, ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಡಿ.ಜಿ. ರಮೇಶ್, ಎನ್ಇಎಸ್ ಕುಲಸಚಿವ ಗಣೇಶ್ಮೂರ್ತಿ ಮತ್ತಿತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.