ADVERTISEMENT

ಉದ್ಯೋಗ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ಗೌರಿಬಿದನೂರು: ಹೆಚ್ಚುವರಿ ಕೆಲಸ ಮಾಡಿದರೂ ಕನಿಷ್ಠ ವೇತನ ನೀಡಲಾಗುತ್ತಿದೆ.  ಅದನ್ನೂ ನಿಯಮಿತವಾಗಿ  ನೀಡುತ್ತಿಲ್ಲ. ಉದ್ಯೋಗ ಭದ್ರತೆಯೂ ಇಲ್ಲ ಎಂಬುದು ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿರುವುದಾಗಿ ಆರೋಪಿಸಿ ತಾಲ್ಲೂಕು ಚಿಕ್ಕಕುರುಗೋಡು ಸಮೀಪದ ಪ್ರೀಕಾಟ್ ಮೆರಿಡಿಯನ್ ಲಿಮಿಟೆಡ್ ಕಾರ್ಖಾನೆಯ ಕಾರ್ಮಿಕರು ಬುಧವಾರ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು.

`ವೇತನವನ್ನು ಸರಿಯಾಗಿ ನೀಡದೆ ವಿನಾಕಾರಣ ಕಡಿತ ಮಾಡಲಾಗುತ್ತದೆ. ಇಲ್ಲಸಲ್ಲದ ನೆಪಗಳನ್ನು ಹೇಳಿ ವಂಚಿಸಲಾಗುತ್ತಿದೆ. ಯಾವುದೇ ಕ್ಷಣ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿಯೇ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ~ ಎಂದು ಕಾರ್ಮಿಕರು ನೊಂದು ನುಡಿದರು.

`ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಭವಿಷ್ಯನಿಧಿ ಸೌಲಭ್ಯ ಕಲ್ಪಿಸಿಲ್ಲ. ನೆಪಗಳನ್ನೊಡ್ಡಿ ಸಂಬಳ ಕಡಿತ ಮಾಡಲಾಗುತ್ತದೆ. ಮಹಿಳಾ ಕಾರ್ಮಿಕರಿಗೆ ನಿತ್ಯ ಶೋಷಣೆಯಾಗುತ್ತಿದೆ. ನಮ್ಮ ಬೇಡಿಕೆಗಳಿಗೆ ಈವರೆಗೆ ಪರಿಹಾರ ಸಿಕ್ಕಲ್ಲ~ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಾವಿತ್ರಮ್ಮ ದೂರಿದರು.

`ಕಾರ್ಮಿಕ ಇಲಾಖೆಯ ನಿಯಮನುಸಾರವಾಗಿ ಕಾರ್ಮಿಕರಿಗೆ ವೇತನ ನೀಡಬೇಕು. ಭವಿಷ್ಯ ನಿಧಿ ಸೌಲಭ್ಯ ಕಲ್ಪಿಸಬೇಕು. ಕಾರ್ಮಿಕರನ್ನು ಸಂಘಟಿಸಲು ಅವಕಾಶ ನೀಡಬೇಕು. ಉದ್ಯೋಗ ತೊರೆದರೆ ಬಾಕಿಯುಳಿದ ಹಣ ಹಿಂದಿರುಗಿಸುವಂತಹ ವ್ಯವಸ್ಥೆಯಾಗಬೇಕು~ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಕಾರ್ಮಿಕರಾದ ತನುಜಾ, ಸುಮಾ, ರೋಜಾ, ಮೇಘನಾ, ಬೇಬಿ ಮತ್ತಿತರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.