ADVERTISEMENT

ಉಳವಿ: ಸಂಭ್ರಮದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 19:30 IST
Last Updated 8 ಫೆಬ್ರುವರಿ 2012, 19:30 IST

ಉಳವಿ (ಉ.ಕ.): ಜೋಯಿಡಾ ತಾಲ್ಲೂಕಿನ ಉಳವಿ ಚೆನ್ನಬಸವೇಶ್ವರ ಮಹಾ ರಥೋತ್ಸವ ಬುಧವಾರ ಲಕ್ಷಾಂತರ ಭಕ್ತಾದಿಗಳ ಜಯಘೋಷದ ಮಧ್ಯೆ ಸಂಭ್ರಮದಿಂದ ನೆರವೇರಿತು.

ಸಂಜೆ 4ರ ಸುಮಾರಿಗೆ  ಟ್ರಸ್ಟ್ ಸಮಿತಿ ಸದಸ್ಯರ ಸಮ್ಮುಖದಲ್ಲಿರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. `ಅಡಿಕೇಶ್ವರ, ಮಡಿಕೇಶ್ವರ ಚೆನ್ನಬಸವೇಶ್ವರ ಹಾರಾಜ ಕೀ ಜೈ~, ` ಅತ್ತ ಆಲದ ಮರ ಇತ್ತ ಉತ್ತತ್ತಿ ಮರ ನಡುವಿರುವ ಉಳವಿ ಚೆನ್ನಬಸವೇಶ್ವರ ಬಹುಪರಾಕ್~, `ಹರಹರ ಮಹಾದೇವ.... ಎನ್ನುವ ಘೋಷಣೆಗಳನ್ನು ಕೂಗುತ್ತ ಭಕ್ತರು ರಥ ಎಳೆದರು.

ದೇವಸ್ಥಾನದ ಮಹಾದ್ವಾರದಿಂದ ರಥಬೀದಿಯಲ್ಲಿ ವೀರಭದ್ರೇಶ್ವರ ದೇವಸ್ಥಾನದವರೆಗೆ ಸಾಗಿದ ರಥ ಅಲ್ಲಿಂದ ಸ್ವಸ್ಥಾನಕ್ಕೆ ಮರಳಿತು. ಭಕ್ತರು ದೇವರಿಗೆ ಉತ್ತತ್ತಿ, ಬಾಳೆಹಣ್ಣು, ಕೊಬ್ಬರಿಯನ್ನು  ಅರ್ಪಿಸಿದರು.
 ಪಲ್ಲಕ್ಕಿ ಉತ್ಸವ, ವೀರಗಾಸೆ, ನಂದಿಕೋಲು, ಕರಡಿ ಮಜಲು ನೃತ್ಯ ಮತ್ತು ಜೋಗತಿಯರು ಕುಂಭಮೇಳದೊಂದಿಗೆ ಮಾಡಿದ ಧಾರ್ಮಿಕ ನೃತ್ಯ ಪ್ರದರ್ಶನ ಜನರ ಗಮನ ಸೆಳೆಯಿತು.

ರಥಬೀದಿಯಲ್ಲಿರುವ ಕಟ್ಟಡ, ಮಳಿಗೆಗೆಳ ಮೇಲೆ ನಿಂತ ಭಕ್ತರು ರಥ ಸಾಗುವ ದೃಶ್ಯವನ್ನು ಕಣ್ತುಂಬಿಕೊಂಡರು.
ಚೆನ್ನಬಸವೇಶ್ವರ ಟ್ರಸ್ಟ್ ಸಮಿತಿಯ ಅಧ್ಯಕ್ಷ ಗಂಗಾಧರ ಕಿತ್ತೂರ, ಉಪಾಧ್ಯಕ್ಷ ಸಂಜಯ ಕಿತ್ತೂರ, ಸದಸ್ಯರಾದ ಬಿ. ಸಿ. ಉಮಾಪತಿ, ದೊಡ್ಡಗೌಡ್ರ, ವ್ಯವಸ್ಥಾಪಕ ಆರ್. ವಿ.ಹೊಸಮಠ, ಶಿವಾನಂದ ಕಿತ್ತೂರ, ಬಸವರಾಜ ಕಿತ್ತೂರು ರಥಕ್ಕೆ ಪೂಜೆ ಸಲ್ಲಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.