ADVERTISEMENT

ಎಸಿಎಫ್ ಹತ್ಯೆ: ಮತ್ತೆ ಮೂವರ ಸೆರೆ

​ಪ್ರಜಾವಾಣಿ ವಾರ್ತೆ
Published 18 ಮೇ 2012, 19:30 IST
Last Updated 18 ಮೇ 2012, 19:30 IST
ಎಸಿಎಫ್ ಹತ್ಯೆ: ಮತ್ತೆ ಮೂವರ ಸೆರೆ
ಎಸಿಎಫ್ ಹತ್ಯೆ: ಮತ್ತೆ ಮೂವರ ಸೆರೆ   

ಕಾರವಾರ: ದಾಂಡೇಲಿಯ ಎಸಿಎಫ್ ಮದನ ನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಮತ್ತೆ ಮೂವರನ್ನು ಬಂಧಿಸಿದ್ದಾರೆ.

ಕುಷ್ಟಗಿಯಲ್ಲಿ ಪಶುವೈದ್ಯ ಪರೀಕ್ಷಕನಾಗಿ ಸೇವೆಯಲ್ಲಿರುವ ಮೂಲತಃ ಗದುಗಿನ ಮಲ್ಲಿಕಾರ್ಜುನ ಚವ್ಹಾಣ, ಇವರ ಪತ್ನಿ ಪ್ರೇಮಾ, ಈಗಾಗಲೇ ಬಂಧನದಲ್ಲಿರುವ ದಾಂಡೇಲಿಯ ಸರ್ಕಾರಿ ನೌಕರ ಅರವಿಂದ ಚವ್ಹಾಣರ ಪುತ್ರ ಅಮಿತ್ (16) ಅವರನ್ನು ಬಂಧಿಸಲಾಗಿದೆ.

ಮಲ್ಲಿಕಾರ್ಜುನ ಮತ್ತು ಪ್ರೇಮಾ ಅವರನ್ನು ತಾ.30ರ ವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸ್ದ್ದಿದು, ಅಮಿತ್‌ನನ್ನು ರಿಮಾಂಡ್ ಹೋಮ್‌ಗೆ ಒಪ್ಪಿಸಲಾಗಿದೆ.

ಎಸ್ಪಿ-ಡಿಎಸ್ಪಿ ವಿಚಾರಣೆ: ದಾಂಡೇಲಿ ಎಸಿಎಫ್ ಮದನ ನಾಯಕ ಹತ್ಯೆ ಪ್ರಕರಣದಲ್ಲಿ ಸಿಐಡಿ ತಂಡ ತನಿಖೆಯನ್ನು ತೀವ್ರಗೊಳಿಸಿದ್ದು, ಜಿಲ್ಲಾ ಎಸ್ಪಿ ಮತ್ತು ದಾಂಡೇಲಿ ಉಪ ವಿಭಾಗದ ಡಿಎಸ್‌ಪಿ ಇಬ್ಬರೂ ವಿಚಾರಣೆ ಎದುರಿಸಲಿದ್ದಾರೆ.

ಲಭ್ಯ ಮಾಹಿತಿಯನ್ವಯ ಡಿಎಸ್‌ಪಿ ಸಾರಾ ಫಾತೀಮಾ ಅವರನ್ನು ಸಿಐಡಿ ಅಧಿಕಾರಿಗಳು ಈಗಾಗಲೇ ವಿಚಾರಣೆಗೊಳಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಗೆಜೆಟೆಡ್ ಅಧಿಕಾರಿ ಮೇಲಿನ ಹಲ್ಲೆ ಕುರಿತು ದೂರು ನೀಡಲು ಪೊಲೀಸ್ ಠಾಣೆಗೆ ಬಂದು 3-4 ಗಂಟೆ ಕಳೆದರೂ ಗ್ರಾಮೀಣ ಠಾಣೆಗೆ ಭೇಟಿ ನೀಡದೆ, ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಲು ಕಾರಣವೇನು ಎನ್ನುವುದರ ಬಗ್ಗೆ ಸಿಐಡಿ ಅಧಿಕಾರಿಗಳು ಡಿಎಸ್‌ಪಿ ಫಾತೀಮಾ ಅವರಿಂದ ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದಲ್ಲಿ ಎಸ್‌ಪಿ ಕೆ.ಟಿ.ಬಾಲಕೃಷ್ಣ ಸರಿ ಮಾರ್ಗದರ್ಶನ ಮಾಡಿದರೇ, ಇಲ್ಲವೇ ಎನ್ನುವ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.