ADVERTISEMENT

ಐಷಾರಾಮಿ ಜೀವನ: ನಾಗರಿಕತೆ ನಾಶ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಶಿರಸಿ : ಕೃಷಿ ಪರಂಪರೆಯ ಉಳಿವಿನಲ್ಲಿ ಭಾರತೀಯ ನಾಗರಿಕತೆಯ ಉಳಿವು ಅಡಗಿದೆ ಎಂದು ಚಲನಚಿತ್ರ ನಟ, ನಿರ್ದೇಶಕ ಸುರೇಶ್ ಹೆಬ್ಳೀಕರ್ ಶುಕ್ರವಾರ ಇಲ್ಲಿ ಹೇಳಿದರು.

ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಎರಡು ದಿನಗಳ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಯುವಜನೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉದ್ಯಮ ಕ್ಷೇತ್ರದಲ್ಲಿ ಸುಸ್ಥಿರ ತಂತ್ರಜ್ಞಾನ ದೀರ್ಘ ಕಾಲದಿಂದ ಪ್ರಗತಿ ಕಂಡಿಲ್ಲ. ಆದರೆ ಕೃಷಿ ಪರಂಪರೆ ಮಾತ್ರ 6,000 ವರ್ಷಗಳಿಂದ ಅವ್ಯಾಹತವಾಗಿ ಮುಂದುವರಿದಿದೆ ಎಂದರು.

`ರೋಮ್, ಮೆಸಪೊಟೆಮಿಯಾದಂತಹ ನಾಗರಿಕತೆ ಕುಸಿಯಲು ಜನರ ಐಷಾರಾಮಿ ಜೀವನ ಶೈಲಿ ಕಾರಣವಾಯಿತು. ನಮ್ಮಲ್ಲೂ ಜಾಗತೀಕರಣ ಛಾಯೆಯಿಂದ ಯುವಕರಲ್ಲಿ ಐಷಾರಾಮಿ ಪ್ರವೃತ್ತಿ ಹೆಚ್ಚುತ್ತಿದೆ. ನಾಗರಿಕತೆ ಕಟ್ಟಿದ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಕ್ಷೇತ್ರಗಳು ಹಿಂದಿನಷ್ಟು ಪ್ರಾಮುಖ್ಯತೆ ಪಡೆದುಕೊಳ್ಳುವಲ್ಲಿ  ಹಿಂದೆ ಬೀಳುತ್ತಿವೆ. ಯುವಜನರಲ್ಲಿ ದೇಶ, ನಾಗರಿಕತೆಯ ಕಾಳಜಿ ಕಡಿಮೆಯಾಗಿದೆ~ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಕೆರೆ, ಕಾಡು, ಮಣ್ಣು, ಪರಿಸರಕ್ಕೆ ಹತ್ತಿರ ಇದ್ದರೆ ಮಕ್ಕಳಲ್ಲಿ ಸೃಜನಶೀಲತೆ ವೃದ್ಧಿಯಾಗುತ್ತದೆ. ಕೃಷಿ ನಿರ್ಲಕ್ಷ್ಯವಾದರೆ ನಾಗರಿಕತೆಯ ಅವಸಾನ ಪ್ರಾರಂಭವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಆರ್. ಹಂಚಿನಾಳ ಮಾತನಾಡಿ, ಮಣ್ಣಿನ ಫಲವತ್ತತೆ, ಪರಿಸರ- ಜಲ ಸಂರಕ್ಷಣೆ, ಸುಸ್ಥಿರ ಆಹಾರ ಬೆಳೆಯಂತಹ ಮಹತ್ವದ ಸಂಗತಿಗಳ ರಕ್ಷಣೆ ಮತ್ತು ಜಾಗೃತಿಯಲ್ಲಿ ಕೃಷಿ, ಅರಣ್ಯ ಪದವೀಧರರ ಪಾತ್ರ ಪ್ರಮುಖವಾಗಿದೆ ಎಂದರು.

ಕೃವಿವಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ.ಪ್ರಮೋದ ಬಾಸರಕರ, ಯುವಜನೋತ್ಸವದ ಸಹ ಸಂಘಟನಾ ಕಾರ್ಯದರ್ಶಿ ಜಿ.ಓ.ಮಂಜುನಾಥ ಉಪಸ್ಥಿತರಿದ್ದರು. ಕಾಲೇಜಿನ ಡೀನ್ ಎಸ್.ಕೆ.ಪಾಟೀಲ ಸ್ವಾಗತಿಸಿದರು. ಪ್ರೊ.ಉಮೇಶ ಮುಕ್ತಾಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.