ಮಂಗಳೂರು: ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಅಭಿಯಾನ ಪೂರ್ಣಗೊಳಿಸಿರುವ `ಕನ್ನಡ ನುಡಿ ತೇರು~ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದೆ. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಬುಧವಾರ ಸುಳ್ಯದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕರಾವಳಿಯಲ್ಲಿ ನುಡಿ ತೇರಿನ ಸಂಚಾರಕ್ಕೆ ಚಾಲನೆ ನೀಡಿದರು.
ವೀರಗಾಸೆ, ಪೂಜಾ ಕುಣಿತ, ನಂದಿಕೋಲು, ಡೊಳ್ಳು ಕುಣಿತ, ಕಂಸಾಳೆ, ಕೊಂಬು, ಕಹಳೆ ಸಹಿತ 240ಕ್ಕೂ ಅಧಿಕ ಜಾನಪದ ಕಲಾವಿದರು ನೀಡಿದ ಅತ್ಯಾಕರ್ಷಕ ಪ್ರದರ್ಶನದ ನಡುವೆ ನುಡಿತೇರನ್ನು ಬರಮಾಡಿಕೊಂಡು ವಿವಿಧ ತಾಲ್ಲೂಕುಗಳಲ್ಲಿ ಸಂಚರಿಸುವುದಕ್ಕೆ ಅವಕಾಶ ನೀಡಲಾಯಿತು.
ಬಳಿಕ ಮುಖ್ಯ ವೇದಿಕೆಯಲ್ಲಿ ನಗಾರಿ ಬಾರಿಸುವ ಮೂಲಕ ಕವಿ ಚಂದ್ರಶೇಖರ ಕಂಬಾರ ಅವರು ಜಾನಪದ ಜಾಥಾಕ್ಕೆ ಚಾಲನೆ ನೀಡಿದರು.
`ಕೃಷ್ಣನಿಗೆ ಇಬ್ಬರು ತಾಯಿಯಂದಿರು ಇದ್ದ ಹಾಗೆ ಈ ಕರಾವಳಿಯ ಜನತೆಗೆ ಎರಡು ಭಾಷೆಗಳು ಮುಖ್ಯವಾಗಿ ಸಿದ್ಧಿಸಿವೆ. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಂಪೂರ್ಣ ಸಹಕಾರ ನೀಡಲಿದೆ~ ಎಂದು ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಹೇಳಿದರು.
ಮುಖ್ಯಮಂತ್ರಿ ಅವರು ಹೊಸ ಘೋಷಣೆಗಳನ್ನು ಮಾಡದಿದ್ದರೂ, ಗಡಿನಾಡಿನ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ಅವುಗಳನ್ನು ಮುಚ್ಚಿಸುವುದಿಲ್ಲ ಎಂಬ ಭರವಸೆ ನೀಡಿ, ಕನ್ನಡದ ಬೆಳವಣಿಗೆಗೆ ಸರ್ಕಾರದ ಮುಂದಿಟ್ಟಿರುವ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ವಚನ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.