ADVERTISEMENT

ಕಾರ್ಯಪ್ಪ ಹುಟ್ಟೂರಲ್ಲಿ ಜಯಂತಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 19:30 IST
Last Updated 28 ಜನವರಿ 2012, 19:30 IST
ಕಾರ್ಯಪ್ಪ ಹುಟ್ಟೂರಲ್ಲಿ ಜಯಂತಿ
ಕಾರ್ಯಪ್ಪ ಹುಟ್ಟೂರಲ್ಲಿ ಜಯಂತಿ   

ಶನಿವಾರಸಂತೆ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮೋತ್ಸವ ನಿತ್ಯೋತ್ಸವವಾಗಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎನ್.ರಘು ಅಭಿಪ್ರಾಯಪಟ್ಟರು.

   ಪಟ್ಟಣದಲ್ಲಿನ ಸಾರ್ವಜನಿಕ ಗ್ರಂಥಾಲಯದಲ್ಲಿ (ಕಾರ್ಯಪ್ಪ ಹುಟ್ಟಿದ ಮನೆ) ಶನಿವಾರ ನಡೆದ ಕಾರ್ಯಪ್ಪ ಅವರ 113ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇಶದ ಮಹಾದಂಡನಾಯಕ ಹುಟ್ಟಿದ ಪುಟ್ಟ ಊರು ಶನಿವಾರಸಂತೆ ವಿಶ್ವದಲ್ಲೇ ಗುರುತಿಸಲ್ಪಟ್ಟಿದೆ. ಶಿಸ್ತುಬದ್ಧ ಜೀವನ ನಡೆಸಿದ ನಾಯಕ ಕಾರ್ಯಪ್ಪ ಅವರ ಭಾವಚಿತ್ರ ಊರಿನ ಮನೆಮನೆಗಳಲ್ಲೂ ರಾರಾಜಿಸಲಿ ಎಂದು ಮನವಿ ಮಾಡಿದರು.

     ಭಾರತಿ ವಿದ್ಯಾಸಂಸ್ಥೆ ಪ್ರಾಂಶುಪಾಲ ಎಂ.ಆರ್.ನಿರಂಜನ್ ಮಾತನಾಡಿ, ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಅವರು ಹುಟ್ಟಿದ ಮನೆಯನ್ನು ಭಾರತಿ ವಿದ್ಯಾಸಂಸ್ಥೆ ದತ್ತು ಸ್ವೀಕರಿಸಲು ಸಿದ್ಧವಿದೆ ಎಂದರು.

       ತಾಲ್ಲೂಕು ಪಂಚಾಯಿತಿ ಸದಸ್ಯೆ ಸವಿತಾ, ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಸ್.ಮಂಜುನಾಥ್, ಜನರಲ್ ಕಾರ್ಯಪ್ಪ ಪುರುಷರ ಸ್ವಸಹಾಯ ಸಂಘದ ಅಧ್ಯಕ್ಷ ಅಮೀರ್‌ಜಾನ್, ಸಬ್‌ಇನ್‌ಸ್ಪೆಕ್ಟರ್ ಮಹದೇವಯ್ಯ, ಡಿ.ಎಸ್.ಮೂರ್ತಿ ಮಾತನಾಡಿ, ಗ್ರಂಥಾಲಯದ ಮುಂದೆ ಕಾರ್ಯಪ್ಪ ಅವರ ಪುತ್ಥಳಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

  ಪಂಚಾಯಿತಿ ಸದಸ್ಯರಾದ ಮಹ್ಮದ್‌ಗೌಸ್, ಭುವನೇಶ್ವರಿ, ರಾಜಶೇಖರ್, ಜ್ಯೋತಿ, ಧನಲಕ್ಷ್ಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಈ.ಶಿವಣ್ಣ, ಭಾರತಿ ವಿದ್ಯಾಸಂಸ್ಥೆ ನಿರ್ದೇಶಕ ಮಹ್ಮದ್‌ಪಾಷ, ಕಾವೇರಿ ಕಾಲೇಜು ಪ್ರಾಂಶುಪಾಲ ಎಚ್.ಎ.ದೇವರಾಜ್ ಇತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.