ADVERTISEMENT

ಕುವೆಂಪು ವೈಚಾರಿಕತೆ ಈಗಲೂ ಪ್ರಸ್ತುತ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ಸುರತ್ಕಲ್: `ಕುವೆಂಪು ತಮ್ಮ ನಾಟಕಗಳಲ್ಲಿ ವರ್ತಮಾನದ ವಿವರಗಳನ್ನು ಪೌರಾಣಿಕ ಚೌಕಟ್ಟಿನಲ್ಲಿ ಸಮರ್ಥವಾಗಿ ಚಿತ್ರಿಸಿದ್ದಾರೆ. ಮೌಢ್ಯಗಳನ್ನು ಪ್ರತಿಬಿಂಬಿಸುವ ಆಧುನಿಕ ಕಾಲಘಟ್ಟದಲ್ಲಿ ಯುವಜನತೆ ಕುವೆಂಪು ಅವರ ವಿಚಾರಧಾರೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ~ ಎಂದು ನಾಟಕ ನಿರ್ದೇಶಕ ಸಿ.ಬಸವಲಿಂಗಯ್ಯ ಅಭಿಪ್ರಾಯಪಟ್ಟರು.

ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಶನಿವಾರ ಕುವೆಂಪು ನಾಟಕಗಳ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು. ಕುವೆಂಪು ನಾಟಕಗಳು ಕಾವ್ಯವಾಗಿಯೂ ಪ್ರತಿಬಿಂಬಿತವಾಗುತ್ತವೆ. ಮತಾತೀತವಾದ ಆಧ್ಯಾತ್ಮಿಕ ದರ್ಶನವೂ ಆಗಿರುತ್ತದೆ. ಭಾರತದ ನಾಟಕ ಪರಂಪರೆಯಲ್ಲೇ ವಿಶೇಷ ಶ್ರೇಣಿ ಪಡೆದಿದ್ದು ದೃಶ್ಯಮಾಧ್ಯಮದ ಒತ್ತಡಗಳಿಂದ ವಿಮುಖರಾಗಿ ಲಿಖಿತ ಸಾಹಿತ್ಯವನ್ನು ಓದಿ ವಾಚನ ಸಂಸ್ಕೃತಿ ಬೆಳೆಸಬೇಕಾಗಿದೆ ಎಂದರು.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಮಾತನಾಡಿ, ಕುವೆಂಪು ನಾಟಕಗಳನ್ನು, ವಿಚಾರಧಾರೆಗಳನ್ನು ರಾಜ್ಯದಾದ್ಯಂತ ಪಸರಿಸುವ ನಿಟ್ಟಿನಲ್ಲಿ ಪ್ರತಿಷ್ಠಾನ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಗೋವಿಂದದಾಸ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಟಿ.ಎಸ್.ಶ್ರೀಪೂರ್ಣ ಅಧ್ಯಕ್ಷತೆ ವಹಿಸಿದ್ದರು. ಕುಪ್ಪಳಿಯ  ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಕರೀಗೌಡ ಬೀಚನಹಳ್ಳಿ, ಗೋವಿಂದದಾಸ ಕಾಲೇಜಿನ ಭಾಷಾ ವಿಭಾಗ ಮುಖ್ಯಸ್ಥ ಪ್ರೊ. ಪಿ.ಕೃಷ್ಣಮೂರ್ತಿ, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಸಬಿಹಾ ಭೂಮೀಗೌಡ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.