ADVERTISEMENT

ಕುಷ್ಟಗಿ: ಬಿತ್ತನೆ ಧಾವಂತದಲ್ಲಿ ಅನ್ನದಾತ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 18:45 IST
Last Updated 1 ಜೂನ್ 2011, 18:45 IST

ಕುಷ್ಟಗಿ: ತಾಲ್ಲೂಕಿನಾದ್ಯಂತ 2 ದಿನಗಳ ಹಿಂದೆ  ಮಳೆ ಸುರಿದಿದ್ದು ಮುಂಗಾರು ಹಂಗಾಮಿನ ಬಿತ್ತನೆಗೆ ಚಾಲನೆ ಸಿಕ್ಕಿದೆ.

ಕೃತ್ತಿಕಾ ಮಳೆ ಕೈಕೊಟ್ಟರೂ ರೋಹಿಣಿ ನೆರವಿಗೆ ಬಂದಿರುವುದರಿಂದ ರೈತರು ಸಂಭ್ರಮ-ಉಲ್ಲಾಸದೊಂದಿಗೆ ಬಿತ್ತನೆ ಕಾರ್ಯದಲ್ಲಿ ತಲ್ಲೆನರಾಗಿದ್ದು ಬುಧವಾರ ಕಂಡುಬಂದಿತು.

`ಭೂಮಿ ಭಾಳಾ ಹಸಿಯಾಗೇತ್ರಿ ಮಳಿ ಒಂದು ವಾರ ಬರದಿದ್ರೂ ಬಿತ್ತಕ ಅಡ್ಡಿ ಇಲ್ರಿ~ ಎಂದೆ ಹೆಸರು ಬಿತ್ತನೆಯಲ್ಲಿ ನಿರತನಾಗಿದ್ದ ನೆರೆಬೆಂಚಿ ಗ್ರಾಮದ ರೈತರು ಹರ್ಷ ವ್ಯಕ್ತಪಡಿಸಿದರು.

ಬಹುತೇಕ ರೈತರು ಅಲ್ಪಾವಧಿ ತಳಿ ಹೆಸರು ಬಿತ್ತನೆಗೆ ಆದ್ಯತೆ ನೀಡಿದ್ದು ಈ ಬೆಳೆ ಕಟಾವು ಮಾಡಿದ ನಂತರ ಸಜ್ಜೆ ಅಥವಾ ಹುರುಳಿ ಬಿತ್ತನೆ ನಡೆಸಬಹುದೆಂಬುದು ಮಸಾರಿ (ಕೆಂಪು) ಜಮೀನಿನ ರೈತರು ಹೇಳಿದರು.
 ಉತ್ತಮ ಮಳೆಯಾಗುತ್ತಿದ್ದಂತೆ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಯಲ್ಲಿ ರೈತರು ತಲ್ಲೆನರಾಗಿದ್ದಾರೆ. ಗೊಬ್ಬರ, ಬೀಜದಂಗಡಿಗಳಲ್ಲಿ ರೈತರು ಖರೀದಿ ಧಾವಂತದಲ್ಲಿ ತೊಡಗಿದ್ದರು.

ಅದೇ ರೀತಿ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಧನದಲ್ಲಿನ ಬಿತ್ತನೆ ಬೀಜ ವಿತರಣೆ ಆರಂಭಗೊಂಡಿದ್ದು ಹೆಸರು, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಬೀಜಗಳಿಗೆ ಸಾಕಷ್ಟು ಬೇಡಿಕೆ ಇತ್ತು. ಸರ್ಕಾರಿ ಬೀಜಕ್ಕೆ ದಾಖಲೆ ಒಯ್ಯಬೇಕು, ಸರದಿಯಲ್ಲಿ ನಿಲ್ಲಬೇಕು.ಹೀಗಾಗಿ ಖಾಸಗಿಯಲ್ಲಿ  ಬೀಜ ಖರೀದಿಸಿದ್ದಾಗಿ ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.