ಹಾಸನ :`ಜಾಗತೀಕರಣ, ಯಾಂತ್ರೀಕರಣದ ಅಬ್ಬರದಿಂದ ಕವಲು ದಾರಿಯಲ್ಲಿರುವ ಕೃಷಿ ಕ್ಷೇತ್ರಕ್ಕೆ ಆಕಾಶವಾಣಿಯ ಕೃಷಿ ಕಾರ್ಯಕ್ರಮಗಳು ಆಶಾಕಿರಣಗಳಾಗಿವೆ~ ಎಂದು ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಎನ್. ಕೆ.ಪ್ರದೀಪ್ ನುಡಿದರು.
ಆಕಾಶವಾಣಿ ಹಬ್ಬದ ಅಂಗವಾಗಿ ಇಲ್ಲಿಯ ಎಚ್ಡಿಪಿಎ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ `ಬಾನುಲಿ ಬೇಸಾಯ~ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ರೈತ, ಕೃಷಿಯಲ್ಲಿಯೇ ಬದುಕನ್ನು ಹಸನು ಮಾಡಿಕೊಳ್ಳುವುದು ಹೇಗೆ ಎಂಬ ಉಪಯುಕ್ತ ಮಾಹಿತಿಯನ್ನು ಆಕಾಶವಾಣಿಯ ಕೃಷಿ ಕಾರ್ಯಕ್ರಮಗಳು ನೀಡುತ್ತಿವೆ. ಸುಸ್ಥಿರ ಕೃಷಿ, ಹೈನುಗಾರಿಕೆ, ಮಳೆನೀರು ಶೇಖರಣೆ, ಜೇನು ಕೃಷಿ, ಮುಂತಾದ ಬೆಳೆಗಳಲ್ಲಿ, ಉತ್ಪಾದನಾ ವೆಚ್ಚ ಕಡಿತ ಮಾಡುವ ವಿಧಾನ ತಿಳಿಸುವುದರ ಜತೆಗೆ ರೈತರು ಕೃಷಿ ಕ್ಷೇತ್ರದಲ್ಲಿಯೇ ಸಾಧನೆ ಮಾಡುವುದಕ್ಕೆ ಬಾನುಲಿ ಬೇಸಾಯ ಸಹಕಾರಿಯಾಗಿದೆ~ ಎಂದರು.
ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಮುಜಾಹಿದ್ ಅಲಂ ಮಾತನಾಡಿ, ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಕಾಶವಾಣಿ ಸಹಾಯಕ ನಿರ್ದೇಶಕಿ ಬಿ.ವಿ.ಪದ್ಮಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಳೆ ಆಶ್ರಿತ ಬೇಸಾಯದ ಬಗ್ಗೆ ಕೃಷಿ ಸಂಶೋಧಕ ಎಂ.ಕೆ.ಕೈಲಾಸಮೂರ್ತಿ, ಕೃಷಿಯಲ್ಲಿ ಉಪಯುಕ್ತ ಸೂಕ್ಷ್ಮ ಜೀವಿಗಳ ಬಗ್ಗೆ ಬಿ.ಸಿ. ಅರವಿಂದ್, ಗೋ ಉತ್ಪನ್ನಗಳ ಬಳಕೆ ಬಗ್ಗೆ ಮಹೇಶ್ ಮೂರ್ತಿ, ಮಳೆ ನೀರಿನ ಸಂರಕ್ಷಣೆ ಬಗ್ಗೆ ಮಲ್ಲಿಕಾರ್ಜುನ ಹೊಸಪಾಳ್ಯ ವಿಚಾರ ಮಂಡಿಸಿದರು.
ಎಚ್ಡಿಪಿಎ ಕಾರ್ಯದರ್ಶಿ ಮಹೇಶ್, ಹಾಸನ ಆಕಾಶವಾಣಿ ತಾಂತ್ರಿಕ ವಿಭಾಗದ ಉಪ ನಿರ್ದೇಶಕ ಸುಧಾಕರನ್, ಕೆಜಿಎಫ್ ಖಜಾಂಚಿ ಯು.ಎಂ.ತೀರ್ಥಮಲ್ಲೇಶ್, ಡಾ.ವಿಜಯ್ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.