ಮಸ್ಕಿ: ದೇಶಕ್ಕೆಲ್ಲ ಅನ್ನ ನೀಡುವ ರೈತ ಸುಖದಿಂದ ಇಲ್ಲ. ಅವನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಆತ್ಮಹತ್ಯೆಯಂಥ ಕೆಟ್ಟ ಕೆಲಸಕ್ಕೆ ರೈತ ಮುಂದಾಗುತ್ತಿದ್ದಾನೆ. ಆತ್ಮಹತ್ಯೆ ನಿಲ್ಲುವಂಥ ರೈತ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿರುವುದು ಸ್ವಾಗತಾರ್ಹ ಎಂದು ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಮೆಚ್ಚುಗೆ ಸೂಚಿಸಿದರು.
ಸೋಮವಾರ ಸಮೀಪದ ಹಿರೇಕಡಬೂರು ಗ್ರಾಮದಲ್ಲಿ ಗುರುಪಾದಯ್ಯಸ್ವಾಮಿ ಮತ್ತು ಪತ್ನಿ ಶಾಂತಮ್ಮನವರ ಅಮೃತಶಿಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕೇವಲ ಕೃಷಿ ಬಜೆಟ್ ಮಂಡನೆಯಾದರೆ ಸಾಲದು. ರೈತರು ಅಸಂಘಟಿತರಾಗಿದ್ದು,ಬೆಳೆಗಳಿಗೆ ಬೆಂಬಲಬೆಲೆ ಸಿಗುವಂತಾಗಬೇಕು” ಎಂದರು.
“ಅನ್ನದೇವರಿಗಿಂತ ಮಿಗಿಲಾದ ದೇವರಿಲ್ಲ. ಅನ್ನವನ್ನು ಶರಣರು ಊಟವೆಂದು ಕರೆಯದೇ ಪ್ರಸಾದವೆಂದು ಕರೆದು ಅದರ ಮಹತ್ವನ್ನು ತಿಳಿಸಿದ್ದಾರೆ. ಪ್ರಸಾದವನ್ನು ಕೆಡಿಸದಂತೆ ಬಳಸುವ ಮೂಲಕ ಹಸಿವಿನಿಂದ ಪರಿತಪಿಸುವ ಜನಕ್ಕೆ ಅನ್ನ ನೀಡುವ ಗುಣವನ್ನು ಬೆಳಸಿಕೊಳ್ಳಬೇಕು” ಎಂದು ತಿಳಿಸಿದರು. ಬಳಗಾನೂರಿನ ವೀರಭದ್ರ ಶಿವಾಚಾರ್ಯರು, ರೌಡಕುಂದಿಯ ಮರಿಸಿದ್ಧಲಿಂಗ ದೇಶಿಕೇಂದ್ರ ಶಿವಾಚಾರ್ಯರು ಭಾಗವಹಿಸಿದ್ದರು. ಶೇಖರಪ್ಪ ಸ್ವಾಗತಿಸಿದರು. ಮರಿಗೌಡ ಪಾಟೀಲ ನಿರ್ವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.