ADVERTISEMENT

ಕೆರೆ ಒಡೆದು ನಷ್ಟ: ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 19:30 IST
Last Updated 18 ಜೂನ್ 2011, 19:30 IST

ರಾಯಚೂರು: ಮುಂಗಾರು ಪೂರ್ವ ಸುರಿದ ಭಾರಿ ಮಳೆಗೆ ರಾಯಚೂರು ತಾಲ್ಲೂಕಿನ ಕೂಡ್ಲೂರು ಗ್ರಾಮದ ಕೆರೆ ಒಡೆದು ಅಪಾರ ನಷ್ಟವಾಗಿದೆ. ಕೆರೆ ನೀರು ಹರಿದು  ರೈತರು, ಗ್ರಾಮಸ್ಥರು ಹಾನಿ ಅನುಭವಿಸಿದ್ದಾರೆ. ಕೂಡಲೇ ಸಂಬಂಧಪಟ್ಟವರಿಗೆ ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಒತ್ತಾಯಿಸಿದೆ.

ಶನಿವಾರ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಂಘಟನೆ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಮನವಿ ಸಲ್ಲಿಸಿ ಶೀಘ್ರ ಪರಿಹಾರ ದೊರಕಿಸಲು ಕೋರಿದರು.ಕೆರೆಯ ನೀರು ರೈತರ ಹೊಲಕ್ಕೆ ನುಗ್ಗಿದೆ. ಬಣವೆಗಳು ಕೊಚ್ಚಿಕೊಂಡು ಹೋಗಿವೆ. ಗ್ರಾಮಕ್ಕ ತೆರಳುವ ರಸ್ತೆಗಳು ಕಿತ್ತು ಹೋಗಿವೆ. ಸಂಚಾರಕ್ಕೆ ಅಸ್ತವ್ಯಸ್ತವಾಗಿದೆ.

ಎರಡೇ ದಿನದಲ್ಲಿ ಈ ರಸ್ತೆ ದುರಸ್ತಿಗೆ ಜಿಲ್ಲಾಡಳಿತವು ಲೋಕೋಪಯೋಗಿ ಇಲಾಖೆ ಸೂಚಿಸಿದ್ದರೂ ಇದುವರೆಗೂ ರಸ್ತೆ ದುರಸ್ತಿ ಆಗಿಲ್ಲ. ಬದಲಾಗಿ ಸ್ವಲ್ಪ ಮಣ್ಣು ಹಾಕಲಾಗಿದೆ. ಮತ್ತೊಂದಿಷ್ಟು ಮಳೆ ಸುರಿದರೂ ಆ ಮಣ್ಣು ಹರಿದು ಹೋಗುತ್ತದೆ. ಸದ್ಯ ಗ್ರಾಮಸ್ಥರು ಸಗಮಕುಂಟಾ ಮತ್ತು ಇಬ್ರಾಹಿಂದೊಡ್ಡಿ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದಾರೆ ಎಂದು ವಿವರಿಸಿದರು.

ಕೂಡ್ಲೂರು ಗ್ರಾಮದ ಸುಮಾರು 150 ಎಕರೆ ಜಮೀನಿಗೆ ನೀರು ಒದಗಿಸುವಂಥದ್ದು. ಕೆರೆ ಒಡೆದು ಬರಿದಾಗಿರುವುದರಿಂದ ಮುಂದಿನ ದಿನಗಳಲ್ಲಿ ರೈತರು ತುಂಬಾ ತೊಂದರೆ ಪಡಬೇಕಾಗಿದೆ. ಪ್ರತಿ ವರ್ಷ ಮಳೆಗಾದಲ್ಲಿ ಈ ಕೆರೆ ಒಡೆಯುವ ಸ್ಥಿತಿ ಕಂಡು ಬರುತ್ತಲೇ ಇತ್ತು. ಈ ವರ್ಷ ಒಡೆದಿದೆ.

ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ದುರಸ್ತಿಗೆ ಮುಂದಾಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈಗ ಚಂದ್ರಬಂಡಾ ಕೆರೆಯು ಒಡೆಯುವ ಸ್ಥಿತಿಗೆ ಬಂದಿದೆ. ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಬೇಕು. ಕಳಪೆ ಮಟ್ಟದ ಕಾಮಗಾರಿ ಬಗ್ಗೆ ಗಮನಕ್ಕೆ ತಂದರೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ವಿನೋದರೆಡ್ಡಿ, ಹುಸೇನಪ್ಪ ನಾಯಕ, ದಸ್ತಗೀರ ನಾಯಕ, ಭಾರತೀಶ ಕೂಡ್ಲೂರು, ಸಯ್ಯದ್ ಸಂಕನೂರು, ಕೊಂಡಪ್ಪ, ಮಲ್ಲೇಶ, ಹುಸೇನಪ್ಪ ಕೂಡ್ಲೂರು, ವಿರೇಶ ಹಾಗೂ ಮತ್ತಿತರರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.