ADVERTISEMENT

ಗಂಗಾವತಿ: ನಾಗರಿಕರಿಂದ ನಗರಸಭೆಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 18:10 IST
Last Updated 2 ಫೆಬ್ರುವರಿ 2011, 18:10 IST
ಗಂಗಾವತಿ: ನಾಗರಿಕರಿಂದ ನಗರಸಭೆಗೆ ಮುತ್ತಿಗೆ
ಗಂಗಾವತಿ: ನಾಗರಿಕರಿಂದ ನಗರಸಭೆಗೆ ಮುತ್ತಿಗೆ   

ಗಂಗಾವತಿ: ನಗರಸಭೆಯ ವ್ಯಾಪ್ತಿಯ 16ನೇ ವಾರ್ಡ್ ದೊಡ್ಡಿ ಲೇಔಟ್‌ನ ಮುಖ್ಯರಸ್ತೆಗೆ ಕಾಂಕ್ರಿಟ್ ಹಾಕಬೇಕು ಮತ್ತು ವಾರ್ಡ್ 20ರಲ್ಲಿನ ರಸ್ತೆಯನ್ನು ವಿಸ್ತರಣೆ ಮಾಡಬೇಕೆಂದು ಒತ್ತಾಯಿಸಿ ವಾರ್ಡಿನ ನಿವಾಸಿಗಳು ನಗರಸಭೆಗೆ ಬುಧವಾರ ಮುತ್ತಿಗೆ ಹಾಕಿದರು.

ಬಿಜೆಪಿ ರೈತ ಮೋರ್ಚಾದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ. ಖಾದರಸಾಬ ನೇತೃತ್ವದಲ್ಲಿ ಸೀತಾ ಆಂಜನೇಯ ದೇವಸ್ಥಾನದಿಂದ ಮೆರವಣಿಗೆ ಹೊರಟ ವಾರ್ಡಿನ ನಿವಾಸಿಗಳು ನಗರಸಭೆಗೆ ಆಗಮಿಸಿ ಮುತ್ತಿಗೆ ಹಾಕಿದರು.

“ಹಲವು ಬಾರಿ ಸಮಸ್ಯೆಗಳ ತೀವ್ರತೆ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಆದರೆ ಪೌರಾಯುಕ್ತರುಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕ ಸಮಸ್ಯೆ ಇತ್ಯರ್ಥವಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ಈ ಬಗ್ಗೆ ಪ್ರಾದೇಶಿಕ ಆಯುಕ್ತರ ಗಮನ ಸೆಳೆಯಲಾಗಿತ್ತು. ತಕ್ಷಣ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದರು. ನಿಗದಿತ ಅವಧಿಯೊಳಗೆ ಸೂಕ್ತ ದಾಖಲಾತಿಗಳನ್ನು ಆಯುಕ್ತರಿಗೆ ಸಲ್ಲಿಸಲು ಪೌರಾಯುಕ್ತರು ವಿಫಲರಾಗಿದ್ದಾರೆ ಎಂದು ದೂರಿದರು.

ಕೂಡಲೇ ಸಂಬಂಧಿಪಟ್ಟ ಅಧಿಕಾರಿಗಳು ಸಮಸ್ಯೆಗೆ ಆದ್ಯತೆ ನೀಡದಿದ್ದಲ್ಲಿ, ಸಾರ್ವಜನಿಕರ ಸಹಭಾಗಿತ್ವದಲ್ಲಿ ರೈತ ಸಂಘಟನೆಯು ಹಂತಹಂತವಾಗಿ ಉಗ್ರ ಹೋರಾಟ ಮಾಡುತ್ತದೆ ಎಂದು ಎಚ್ಚರಿಸುವ ಪತ್ರವನ್ನು ಪೌರಾಯುಕ್ತ ಬಿ.ಡಿ. ಬಸವರಾಜಪ್ಪ ಅವರಿಗೆ ಸಲ್ಲಿಸಲಾಯಿತು.

ದೊಡ್ಡಿ ಲೇಔಟ್ ನಿವಾಸಿಗಳಾದ ಹುಸೇನಸಾಬ, ದುರುಗಪ್ಪ, ಮನಿಯಾರ ನಬೀಸಾಬ, ವಿ. ಶಾಬುದ್ದೀನ್, ಎಂ. ಮಹೆಬೂಬ ಇತರರು  ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.