ADVERTISEMENT

ಗಡಿ ಭಾಗದ ಕನ್ನಡ ಶಾಲೆ ಮುಚ್ಚಬೇಡಿ: ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST

ಬೆಳಗಾವಿ: `ಜಿಲ್ಲೆಯ ಕನ್ನಡ ಶಾಲೆಗಳನ್ನು ಮುಚ್ಚುವುದನ್ನು ತಡೆಯಲು ಸರ್ಕಾರ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು` ಎಂದು ವಿವಿಧ ಕನ್ನಡ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಡಾ. ಏಕ್‌ರೂಪ್ ಕೌರ್ ಅವರನ್ನು ಒತ್ತಾಯಿಸಿದ್ದಾರೆ.

ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು, ಜಿಲ್ಲೆಯ ಗಡಿ ಭಾಗದಲ್ಲಿ ಕನ್ನಡ ಶಾಲೆ ಮುಚ್ಚುವ ಸ್ಥಿತಿ ತಲುಪಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.

ಕನ್ನಡ ಕಾನ್ವೆಂಟ್ ಹೆಸರಿನಲ್ಲಿ ಶಾಲೆ ತೆರೆದು ಇಂಗ್ಲಿಷ್ ಕಾನ್ವೆಂಟ್ ಶಾಲೆ ನಡೆಸುತ್ತಿರುವುದನ್ನು ನಿಲ್ಲಿಸಬೇಕು. ಇಂಥ ಶಾಲೆಗಳ ಅನುಮತಿಯನ್ನು ಕೂಡಲೇ ರದ್ದುಗೊಳಿಸಬೇಕು. ಆಗ ಕನ್ನಡ ಶಾಲೆಗಳು ಮುಚ್ಚುವುದನ್ನು ತಡೆಯಲು ಸಾಧ್ಯವಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಯಳ್ಳೂರ ಬಳಿಯ ರಾಜಹಂಸಗಡದ ಅಭಿವೃದ್ಧಿ ವಿರೋಧಿಸುತ್ತಿರುವ ಮರಾಠಿ ಮುಖಂಡರ ವರ್ತನೆಯನ್ನು ತೀವ್ರವಾಗಿ ಖಂಡಿಸಲಾಯಿತು. ಗಡಿ ಭಾಗದಲ್ಲಿ ಎಲ್ಲ ದಾಖಲೆಗಳನ್ನು ಕನ್ನಡದಲ್ಲಿ ಮಾತ್ರ ನೀಡಬೇಕು.

ಗಡಿಭಾಗದಲ್ಲಿ ಭಾಷಾ ಅಲ್ಪಸಂಖ್ಯಾತರು ಈ ನೆಲದ ಭಾಷ್ನೆ ಕಲಿತು ಮುಖ್ಯ ವಾಹಿನಿಯಲ್ಲಿ ಸೇರಬೇಕು ಎಂದರು.
ಸಭೆಯ ಬಳಿಕ ಏಕ್‌ರೂಪ್ ಕೌರ್ ಅವರನ್ನು ಕನ್ನಡ ಸಂಘಟನೆಗಳ ಮುಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿ, ಗಡಿ ಭಾಗದಲ್ಲಿನ ಕನ್ನಡ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಸಿದ್ಧನಗೌಡ ಪಾಟೀಲ, ಕಲ್ಯಾಣರಾವ ಮುಚಳಂಬಿ, ಎಸ್.ಡಿ. ಇಂಚಲ, ರಮೇಶ ಸೊಂಟಕ್ಕಿ, ಅಶೋಕ ಚಂದರಗಿ, ಶಂಕರ ಬಾಗೇವಾಡಿ, ಶಂಕರ ಕಳಸಣ್ಣವರ, ಸುಜಾತಾ ಉಲ್ಲಾಳ, ಶ್ರೀಕರ ಉಲ್ಲಾಳ, ರಾಜು ಟೋಪಗಿ, ಶ್ರೀಕಾಂತ ಬೋಪಳಾಪುರ, ವಿನೋದ ಹೊಸಮನಿ, ರಾಜು ಕುಸೋಜಿ, ಎಂ.ಜಿ. ಮಕಾನದಾರ, ರಾಜು ವೈಜನವರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.