ಮಂಡ್ಯ: ಭಾರತದ ಮಾಜಿ ಉಪ ಪ್ರಧಾನಿ, ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 105ನೇ ಜನ್ಮ ದಿನವಾದ ಗುರುವಾರ ಜಿಲ್ಲಾಡಳಿತ ಮತ್ತು ವಿವಿಧ ಸಂಘಟನೆಗಳು ಬಾಬೂಜಿಯವರ ಸೇವೆಯನ್ನು ಸ್ಮರಿಸಿ, ವ್ಯಕ್ತಿತ್ವದ ಗುಣಗಾನ ಮಾಡಿದವು.
ಇದಕ್ಕೂ ಮೊದಲು ಕಾವೇರಿ ವನದಲ್ಲಿ ಜಗಜೀವನರಾಂ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. `ಭಾರತ ಕಂಡ ಧೀಮಂತ ನಾಯಕರ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುವ ಡಾ.ಬಾಬು ಜಗಜೀವನರಾಂ ಅವರು ದಲಿತರು ಹಾಗೂ ರೈತರ ಏಳಿಗೆಗಾಗಿ ಅಪಾರ ಕೊಡುಗೆ ನೀಡಿದ್ದಾರೆ. ಸಮಕಾಲೀನ ರಾಜಕಾರಣದಲ್ಲಿ ಮುಂಚೂಣಿಯಲ್ಲಿ ಇದ್ದರೂ ಅವರು ಪ್ರಧಾನ ಮಂತ್ರಿಯಾಗಲಿಲ್ಲ.
ದಲಿತ ವರ್ಗಕ್ಕೆ ಸೇರಿದ್ದರಿಂದಲೇ ಈ ಅವಕಾಶ ತಪ್ಪಿಹೋಗಿದೆ ಎಂದು ಅನಿಸುತ್ತದೆ~ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಣ್ಣ ಅವರು ವಿಷಾದ ವ್ಯಕ್ತಪಡಿಸಿದರು.ಮೈಷುಗರ್ ಅಧ್ಯಕ್ಷ ನಾಗರಾಜಪ್ಪ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಯರಾಂ ಮಾತನಾಡಿದರು.
ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಮುಡಾ ಅಧ್ಯಕ್ಷ ಬಸವೇಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಸಿ.ಜಯಣ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ರಾಜಣ್ಣ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ವೆಂಕಟರಮಣ ರೆಡ್ಡಿ, ನಗರಸಭೆ ಆಯುಕ್ತ ಪ್ರಕಾಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.