ಚಿತ್ರದುರ್ಗ: ಆಂಧ್ರ ಪ್ರದೇಶದ ಗಡಿ ಗ್ರಾಮಗಳಿಂದ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಪ್ರಕರಣವನ್ನು ಚಳ್ಳಕೆರೆ ಪೊಲೀಸರು ಭೇದಿಸಿದ್ದಾರೆ. ಇದನ್ನು ಮೈಸೂರಿನ ಕಾಲೇಜುಗಳ ಬಳಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಸಾಗಿಸಲಾಗುತ್ತಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಬೊಮ್ಮನಹಾಳ್ ರಸ್ತೆಯ ರಾಣಿ ತೋಟದಲ್ಲಿ ವಾಸವಿರುವ ವೆಲ್ಡಿಂಗ್ ಕೆಲಸಗಾರ ಮೌಲಾಸಾಬ್ (27), ಆಟೋ ಚಾಲಕರಾದ ದಾದಾಪೀರ್ (19), ದಾದಾ ಖಲಂದರ್ (20), ವೆಲ್ಡಿಂಗ್ ಕೆಲಸಗಾರ ವಾಹೀದ್ (26) ಅವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಮೂರು ಲಗೇಜ್ ಬ್ಯಾಗ್ಗಳಲ್ಲಿದ್ದ ರೂ.54 ಸಾವಿರ ಮೌಲ್ಯದ 27 ಕೆ.ಜಿ. ತೂಕದ ಒಣಗಿದ ಗಾಂಜಾ ಸೊಪ್ಪು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಜಿ. ಕ್ಯಾತನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗುರುವಾರ ಬೆಳಗಿನ ಜಾವ ಬಳ್ಳಾರಿಯಿಂದ ಕೆಎಸ್ಆರ್ಟಿಸಿ ಬಸ್ನಲ್ಲಿ ಚಳ್ಳಕೆರೆಗೆ ಆಗಮಿಸಿದ್ದ ಆರೋಪಿಗಳನ್ನು ನೆಹರು ವೃತ್ತದಲ್ಲಿ ಮೈಸೂರು ಬಸ್ಗೆ ಕಾಯುತ್ತಿದ್ದ ಸಂದರ್ಭದಲ್ಲಿ ಬಂಧಿಸಲಾಗಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.