ADVERTISEMENT

ಗುರಿ ಸಾಧನೆಗೆ ಮುಂದಾಗಲು ಸಲಹೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 18:30 IST
Last Updated 14 ಫೆಬ್ರುವರಿ 2011, 18:30 IST

ಕೃಷ್ಣರಾಜಪೇಟೆ: ‘ದೇಶವನ್ನು ಸದೃಢವಾಗಿ ಕಟ್ಟುವ ಕೆಲಸದಲ್ಲಿ ಯುವ ಜನರು ತಮ್ಮ ಸಾಮರ್ಥ್ಯವನ್ನು ಬಳಕೆ ಮಾಡಿಕೊಳ್ಳಬೇಕು. ಜೀವನದಲ್ಲಿ ಉನ್ನತ ಗುರಿ ಸಾಧನೆಗೆ ಮುಂದಾಗಬೇಕು’ ಎಂದು ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜು ಸಲಹೆ ನೀಡಿದರು.ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಪಟ್ಟಣದ ಶಿಕ್ಷಕರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಯುವ ಜನಮೇಳವನ್ನು ಅವರು ಉದ್ಘಾಟಿಸಿ ಮಾತನಾಡಿದರು.

‘ಕಾಲೇಜಿನ ದಿನಗಳಲ್ಲಿ ಸ್ವಚ್ಛಂದವಾಗಿ ಸುತ್ತಾಡುವ ಯುವಜನರಲ್ಲಿ ಕೆಲವರು ಕೆಟ್ಟ ಪ್ರಚೋದನೆಗಳಿಗೆ ಒಳಗಾಗಿ ಅಡ್ಡದಾರಿಯಲ್ಲಿ ಸಾಗುತ್ತಿದ್ದು, ತಮ್ಮ ಹೆತ್ತವರಿಗೆ, ಗುರುಜನರಿಗೆ ಅಪಖ್ಯಾತಿ ಬರಲು ಕಾರಣರಾಗುತ್ತಿದ್ದಾರೆ.ಆದರೆ, ಮುಂದೊಂದು ದಿನ ಇಂತಹ ಮಕ್ಕಳು ತಮ್ಮ ತಪ್ಪು ನಡೆಯ ಬಗ್ಗೆ ಪಶ್ಚಾತ್ತಾಪ ಪಡಬೇಕಾಗುತ್ತದೆ’ ಎಂದರು.

’ಯಾವುದೇ ಸಂದರ್ಭದಲ್ಲೂ ಎಂತಹುದೇ ಪ್ರಲೋಭನೆಗೂ ಒಳಗಾಗದೆ ಉನ್ನತ ಗುರಿ ಇಟ್ಟುಕೊಂಡು ಅದನ್ನು ತಲುಪುವೆಡೆಗೆ ಯುವಜನರು ಮುಂದೆ ಸಾಗಬೇಕು’ ಎಂದು ಡಾ.ಎಚ್.ಎಲ್.ನಾಗರಾಜು ತಿಳಿಸಿದರು. ಪುರಸಭಾಧ್ಯಕ್ಷ ಚಂದ್ರೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಹುಲ್ಲಹಳ್ಳಿ ಮಂಜುಳಾ, ಟಿಎಪಿಸಿಎಂಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಪುರಸಭೆ ಸದಸ್ಯ ಕೆ.ಆರ್.ನೀಲಕಂಠ, ಮುಖ್ಯಾಧಿಕಾರಿ ಬಸವರಾಜು, ತಾಲ್ಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಚನ್ನಕೇಶವ, ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಕೆ.ಹರಿಚರಣ್  ತಿಲಕ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಯರಾಮು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.