ಗುಲ್ಬರ್ಗ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೋಲಾರದಲ್ಲಿ ಈಚೆಗೆ ನಡೆದ ಸಮಾವೇಶದಲ್ಲಿ ವೀರಶೈವ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ಖಂಡಿಸಿ ಶನಿವಾರ ಇಲ್ಲಿನ ವೀರಶೈವ ಯುವ ವೇದಿಕೆ ಹಾಗೂ ವೀರಶೈವ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಘಟಕಗಳ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಬಸವೇಶ್ವರ ವೃತ್ತದಿಂದ ಅಣಕು ಶವಯಾತ್ರೆ ಮಾಡಿ ಪ್ರತಿಭಟಿಸಿದರು. ನಂತರ ಸರ್ದಾರ್ ವಲಭಭಾಯಿ ಪಟೇಲ್ ವೃತ್ತದಲ್ಲಿ ಕುಮಾರಸ್ವಾಮಿ ಪ್ರತಿಕೃತಿ ದಹನ ಮಾಡಿದರು.
ಕುಮಾರಸ್ವಾಮಿ ಹೇಳಿಕೆಯಿಂದ ವೀರಶೈವ ಸಮಾಜದವರಿಗೆ ನೋವು ಉಂಟಾಗಿದ್ದು, ಕುಮಾರಸ್ವಾಮಿ ಅವರು ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಆರ್. ಗರೂರ ಎಚ್ಚರಿಸಿದರು.
ಜಾತ್ಯತೀತ ಜನತಾದಳ ಪಕ್ಷದಲ್ಲಿರುವ ವೀರಶೈವ ಸಮಾಜದ ಶಾಸಕರು ವೀರಶೈವರ ಬಗ್ಗೆ ಕಾಳಜಿ ಇದ್ದರೆ ಪಕ್ಷ ಬಿಟ್ಟು ಹೊರಬರಲಿ ಎಂದು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸುರೇಶ ಪಾಟೀಲ ಜೋಗೂರ ಆಗ್ರಹಿಸಿದರು.
ಮುಖಂಡರಾದ ಶಾಂತು ಖ್ಯಾಮ, ಈರಣ್ಣ ಗೊಳೆದ, ಗುರು ಕೋರವಾರ, ಪ್ರಕಾಶ ಮಾಲಿಪಾಟೀಲ, ಲಕ್ಷ್ಮೀಕಾಂತ ವಾಗೆ, ಅಮರೇಶ್ವರ ನುಲಾ, ರಮೇಶ ಕಡಾಳೆ, ಶರಣು ಬೂಸನೂರ, ಗುಂಡು ಬೂಸನೂರ, ರಾಜು ಕೋಟೆ, ಸಿದ್ದು ತೆಗನೂರ, ಮಹೇಶ ಪಾಟೀಲ, ಚಂದ್ರಶೇಖರ ಸಾವು ಉಪ್ಥತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.