ADVERTISEMENT

ಗುಲ್ಬರ್ಗ ನೆಲದಲ್ಲಿ ಸಂಸ್ಕೃತಿಯ ನರ್ತನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ಗುಲ್ಬರ್ಗ:  ಕಲೆ, ಸಂಸ್ಕೃತಿಯ ದೃಷ್ಟಿಯಿಂದ ಸಂಪದ್ಭರಿತವಾದ ಈ ನೆಲದಲ್ಲಿ ಸಂಸ್ಕೃತಿ ಕುಣಿದಾಡುತ್ತಿದೆ ಎನ್ನುವುದಕ್ಕೆ ನಿಮ್ಮೆಲ್ಲರ ಉತ್ಸಾಹ, ಸಂಭ್ರಮವೇ ಸಾಕ್ಷಿಯಾಗಿದೆ ಎಂದು ಖ್ಯಾತ ರಂಗಭೂಮಿ ಕಲಾವಿದೆ ಹಾಗೂ ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಅಭಿಪ್ರಾಯಪಟ್ಟರು.

ಗುಲ್ಬರ್ಗ ವಿಶ್ವವಿದ್ಯಾಲಯದ ಮಹತ್ಮಗಾಂಧಿ ಸಭಾಂಗಣದಲ್ಲಿ ಗುರುವಾರ ಆರಂಭವಾದ ಅಂತರ ಮಹಾವಿದ್ಯಾಲಯಗಳ ಯುವ ಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳ ಉತ್ಸಾಹ ಇಮ್ಮಡಿಗೊಳಿಸುವ ಯುಜನೋತ್ಸವ ಜೀವನದ ಹಾದಿ ಸುಗಮಗೊಳಿಸುವಲ್ಲಿ ನೆರವಾಗಬಲ್ಲುದು. ಬದುಕಿನುದ್ದಕ್ಕೂ ಇದೇ ಸಂಭ್ರಮ ನಿಮ್ಮಲ್ಲಿ ಮನೆ ಮಾಡಿರಲಿ ಎಂದು ತಿಳಿಸಿದರು.

~ಲಕ್ಷಾಪತಿ ರಾಜನ ಕಥೆ~ ನಾಟಕದ ~ಶ್ರೀಗಣಪತಿರಾಯ ಪಾರ್ವತಿ ತನಯ ಶರಣು, ಶರಣು ನಿನಗ~ ಎಂಬ ಹಾಡನ್ನು ತುಂಬಾ ಸುಶ್ರಾವ್ಯವಾಗಿ ಹಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಮಾತನಾಡಿ, ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ದಕ್ಷಿಣ ವಲಯ ಯುವಜನೋತ್ಸವದ ಆತಿಥ್ಯವನ್ನು ಗುಲ್ಬರ್ಗ ವಿಶ್ವವಿದ್ಯಾಲಯ ವಹಿಸಿಕೊಂಡಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅತ್ಯಂತ ಸಮರ್ಥವಾಗಿ ಪ್ರಸ್ತುತಪಡಿಸಬೇಕು ಎಂದು ಕರೆ ನೀಡಿದರು.

ರಿಜಿಸ್ಟ್ರಾರ್ ಪ್ರೊ. ಎಸ್.ಎಲ್. ಹಿರೇಮಠ,  ಹಣಕಾಸು ಅಧಿಕಾರಿ ಪ್ರೊ. ಬಿ.ಎಂ. ಕನ್ನೆಳ್ಳಿ, ಸಿಂಡಿಕೇಟ್ ಸದಸ್ಯರಾದ ಆರ್.ಬಿ. ಮಾಲಿಪಾಟೀಲ, ಎಸ್.ಜಿ. ಭಾರತಿ, ರಾಘವೇಂದ್ರ ಕುಲಕರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಕೆ. ಲಿಂಗಪ್ಪ ಸ್ವಾಗತಿಸಿದರು. ಎಂ. ವೆಂಕಟೇಶ ವಂದಿಸಿದರು. ನಂತರ ವಿವಿಧ ವಿಭಾಗಗಳಲ್ಲಿ ನಾಟಕ, ವೃಂದ ಗಾಯನ, ಮಣ್ಣಿನ ಆಕೃತಿ, ಅಂಟು ಪತ್ರಗಳ ತಯಾರಿ ಮುಂತಾದ ಸ್ಪರ್ಧೆಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.