ADVERTISEMENT

ಜನರಿಗೋಸ್ಕರ ಜನರೊಂದಿಗೆ ಕೆಲಸ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ಗುಲ್ಬರ್ಗ: `ಭಾರತೀಯ ನಾಗರಿಕ ಸೇವೆ (ಐಎಎಸ್) ಉತ್ತೀರ್ಣರಾದ ನಂತರ ಮೊಟ್ಟಮೊದಲು ಹೈದರಾಬಾದ್ ಕರ್ನಾಟಕ ವಿಭಾಗದಿಂದಲೇ ಬೀದರ್ ಸಹಾಯಕ ಆಯುಕ್ತೆ (ಎಸಿ) ಆಗಿ ಸೇವೆ ಆರಂಭಿಸಿದ್ದೇನೆ. ಮೊದಲಿನಿಂದಲೂ ಜನರಿಗೋಸ್ಕರ ಜನರೊಂದಿಗೆ ಸೇರಿಕೊಂಡು ಕೆಲಸ ಮಾಡುವುದು ನನ್ನ ಅಭ್ಯಾಸ~ ಎಂದು ಗುಲ್ಬರ್ಗ ವಿಭಾಗದ ನೂತನ ಪ್ರಾದೇಶಿಕ ಆಯುಕ್ತರಾಗಿ ಶನಿವಾರ ಅಧಿಕಾರ ಸ್ವೀಕರಿಸಿದ ಕೆ.ರತ್ನಪ್ರಭಾ ಹೇಳಿದರು.

ಗುಲ್ಬರ್ಗದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು ಜನರ ಕುಂದುಕೊರತೆಗಳ ಕಡೆಗೆ ಗಮನ ಕೊಡುವುದು ಮೊದಲ ಆದ್ಯತೆ. ಸಹಾಯಕ ಕಮಿಷನರ್, ಜಿಲ್ಲಾಧಿಕಾರಿಯಾಗಿದ್ದಾಗ ಜನರೊಂದಿಗೆ ನೇರವಾಗಿ ವ್ಯವಹರಿಸುವ ಸಂದರ್ಭ ಇರುತ್ತಿತ್ತು. ನಾಗರಿಕ ಸೇವಾ ಕ್ಷೇತ್ರದಲ್ಲಿ 28 ವರ್ಷಗಳ ಅನುಭವ ಇರುವುದರಿಂದ ಸಹಜವಾಗಿ ಆಡಳಿತ ಕ್ಷೇತ್ರವ್ಯಾಪ್ತಿ ಹೆಚ್ಚಾಗಿದೆ. ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ಇತರ  ಅಧಿಕಾರಿಗಳಿಂದ ಕೆಲಸ ಮಾಡಿಸಬೇಕಾಗುತ್ತದೆ ಎಂದರು.

`ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಹೆಚ್ಚಿನ ಅನುಭವ ಪಡೆದುಕೊಂಡಿದ್ದೇನೆ. ಹೈದರಾಬಾದ್ ಕರ್ನಾಟಕ ವಿಭಾಗದಲ್ಲಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದೊಡ್ಡ ಐ.ಟಿ. ಕಂಪೆನಿಗಳಲ್ಲಿ ಕೆಲಸ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆನ್ನುವುದು ನನ್ನ ಆಶಯ~ ಎಂದು ನುಡಿದರು.

ಜನರು ಭೀತಿಯಿಲ್ಲದೆ ಸಮಸ್ಯೆಗಳನ್ನು ಹೇಳಿಕೊಳ್ಳುವಂತಾಗಬೇಕು. ಯಾವುದೇ ಯೋಜನೆಗಳು ಅನುಷ್ಠಾನಗೊಳ್ಳಲು ಜನರ ಸಹಕಾರ ತುಂಬಾ ಮುಖ್ಯ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.