ಚಿಕ್ಕಮಗಳೂರು: ‘ಜಾತಿ ಹೆಸರಲ್ಲಿ ಚುನಾವಣೆಯಲ್ಲಿ ನನ್ನನ್ನು ಮಣಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಷಡ್ಯಂತ್ರ ನಡೆಸಿವೆ’ ಎಂದು ಶಾಸಕ ಸಿ.ಟಿ.ರವಿ ದೂಷಿಸಿದರು.
ನಗರದ ವಿಜಯಪುರದ ಗಣಪತಿ ಪೆಂಡಾಲ್ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ‘ಪ್ರಗತಿ ಪಥ – ವಿಶ್ವಾಸದ ನಡಿಗೆ’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.‘ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಕನಕದಾಸರ ಹೆಸರು ಹೇಳುವ ಯೋಗ್ಯತೆ ಕಾಂಗ್ರೆಸ್ಸಿಗೆ ಇಲ್ಲ. ದಾರ್ಶನಿಕರು, ಮಹಾತ್ಮರು ಸಮಾಜ ಒಡೆಯುವ ಕೆಲಸ ಮಾಡಲಿಲ್ಲ. ಅವರು ಜನರಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡಿದರು. ಆದರೆ, ಕಾಂಗ್ರೆಸ್ ಜಾತಿಗಳನ್ನು ಎತ್ತಿ ಕಟ್ಟುತ್ತಿದೆ. ಜಾತಿಯ ವಿಷ ಬೀಜ ಬಿತ್ತುತ್ತಿದೆ’ ಎಂದು ದೂರಿದರು.ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಕನಕದಾಸರ ವಾರಸುದಾರಿಕೆ ಜಾತಿ ಆಧಾರದಲ್ಲಿ ದೊರೆಯುವುದಿಲ್ಲ. ಅವರು ಜಾತಿಯ ನಾಯಕರಲ್ಲ. ದಾರ್ಶನಿಕರ ಮಹಾತ್ಮರ ಸಿದ್ಧಾಂತ ಅಳವಡಿಸಿಕೊಂಡಾಗ ಮಾತ್ರ ಅವರ ವಾರಸುದಾರರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
‘ಕೇಂದ್ರ ಸರ್ಕಾರ ಸಿಆರ್ಎಫ್ ಯೋಜನೆಯಲ್ಲಿ ಜಿಲ್ಲೆಗೆ 2.5 ಕೋಟಿ ಮಂಜೂರು ಮಾಡಿತ್ತು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬಳಿ ಪಟ್ಟು ಹಿಡಿದು ₹ 103 ಕೋಟಿ ಮಂಜೂರು ಮಾಡಿಸಿದ್ದೇನೆ. ಜಿಲ್ಲೆಗೆ ಮಂಜೂರಾಗಿರುವ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜುಗಳಿಗೆ ಕಾಂಗ್ರೆಸ್ ಸರ್ಕಾರವು ಅನುದಾನ ಬಿಡುಗಡೆ ಮಾಡದೇ ರಾಜಕೀಯ ಮಾಡಿದೆ’ ಎಂದು ಆಪಾದಿಸಿದರು.
ಪ್ರಗತಿ ಪಥ ವಿಶ್ವಾಸದ ನಡಿಗೆ ನಿಮಿತ್ತ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಅಂಗವಾಗಿ ಚಿಕ್ಕದೇವನೂರು, ಜಾಗರ ಶಕ್ತಿ, ಎಸ್.ಬಿದರೆ ಗ್ರಾಮಗಳಿಂದ ಜನರು ತಂಡೋಪತಂಡವಾಗಿ ವಿಜಯಪುರ ಗಣಪತಿ ಮೈದಾನಕ್ಕೆ ಬಂದಿದ್ದರು.
ಮುಖಂಡರಾದ, ಬಿ.ಜಿ.ಸೋಮಶೇಖರಪ್ಪ, ಜಸಂತಾ ಅನಿಲ್ ಕುಮಾರ್, ಕವಿತಾ ಶೇಖರ್, ರವೀಂದ್ರ ಬೆಳವಾಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.