ಆನೇಕಲ್ : ಪಾಶ್ಚಾತ್ಯ ಸಂಸ್ಕೃತಿ ಪ್ರಭಾವದಿಂದ ಜಾನಪದ ಕಲೆಗಳು ಮರೆಯಾಗುತ್ತಿವೆ. ಜಾನಪದ ಕಲೆಗಳಿಗೆ ಸರ್ಕಾರ ಹಾಗೂ ಸಾರ್ವಜನಿಕರು ಪ್ರೋತ್ಸಾಹ ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ರತ್ನ ಶ್ರೀರಾಮಲು ನುಡಿದರು.ತಾಲ್ಲೂಕಿನ ಸರ್ಜಾಪುರದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಡಾ.ಅಂಬೇಡ್ಕರ್ ಯುವ ಜನ ಸಾಂಸ್ಕೃತಿಕ ಸಂಘ, ಚಿನ್ಮಯ ಯುವ ಜನ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಯುವಜನ ಮೇಳದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಯುವ ಜನರಲ್ಲಿರುವ ಪ್ರತಿಭೆಗಳನ್ನು ಗುರುತಿಸಬೇಕಾಗಿದೆ. ಜಾನಪದ ಸೊಗಡಿನ ಗೀತೆಗಳು, ಗೀಗೀ ಪದಗಳು, ಲಾವಣಿ, ಕೋಲಾಟ ಮತ್ತಿತರ ಪ್ರಕಾರಗಳಿಗೆ ಪ್ರಚಾರ ಅಗತ್ಯ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಪ್ರಭಾಕರ್ ಮಾತನಾಡಿ ಮನುಷ್ಯನಿಗೆ ಜಾನಪದ ಗೀತೆಗಳು ನೆಮ್ಮದಿ ಮತ್ತು ಉಲ್ಲಾಸ ನೀಡುತ್ತವೆ. ಇವುಗಳಲ್ಲಿ ಯುವ ಜನತೆ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದರು.
ಸರ್ಜಾಪುರ ಗ್ರಾ.ಪಂ ಉಪಾಧ್ಯಕ್ಷ ವೈ.ಶ್ರೀರಾಮಲು, ನೆರಿಗಾ ಗ್ರಾ.ಪಂ ಉಪಾಧ್ಯಕ್ಷ ಕೆ.ರಾಮು, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ವೈ.ಚಿನ್ನಪ್ಪ ಚಿಕ್ಕಹಾಗಡೆ, ಕೆ.ಮಹೇಶ್, ವೆಂಕಟರಾಜು, ಜರ್ನಾರ್ದನ ಬಾಬು, ನಂಜೇಶ್ ಮತ್ತಿತರರು ಹಾಜರಿದ್ದರು. ಜಾನಪದ ನೃತ್ಯ, ಭಾವಗೀತೆ, ರಾಗಿಬೀಸೋ ಪದ, ಕೋಲಾಟ, ಭಜನೆ, ಗೀಗೀ ಪದ, ರಂಗ ಗೀತೆ, ಲಾವಣಿ, ಏಕಪಾತ್ರಾಭಿನಯ ಇತರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.