ರಾಯಚೂರು:ಆಧುನಿಕತೆಯ ಅಬ್ಬರದಲ್ಲಿ ನಮ್ಮ ಪರಂಪರೆ-ಸಂಸ್ಕೃತಿಯ ಭಾಗಗಳಾದ ಭಾಷೆ ಸೊಗಸು, ಸಂಗೀತ, ಕಲೆ, ಪ್ರೀತಿ ಮತ್ತು ವಾತ್ಸಲ್ಯದಂಥ ಗುಣಗಳು ಕೊಚ್ಚಿ ಹೋಗುತ್ತಿದ್ದು, ದುಃಖ, ಬಡತನ ಮರೆತು ಕಲಾಪ್ರತಿಭೆ ಮೆರೆಯುವ ಜಾನಪದ ಕಲಾವಿದರ ಪ್ರದರ್ಶನ ವೀಕ್ಷಿಸಿ ಪ್ರೋತ್ಸಾಹಿಸುವ ಗುಣ ಬೆಳೆಸಿಕೊಳ್ಳಬೇಕಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು ಚನ್ನಬಸಪ್ಪ ಹೇಳಿದರು.
ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಜಿಲ್ಲಾ ಆಡಳಿತದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ’ರಾಯಚೂರು ಜಿಲ್ಲಾ ಜಾನಪದ ಸಂಭ್ರಮ’ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಈ ರೀತಿಯ ಕಾರ್ಯಕ್ರಮಗಳು ನಮ್ಮ ಕಲೆ ಸಂಸ್ಕೃತಿಯ ಬಗ್ಗೆ ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡುವ ದಿಸೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.’ಎಂದು ಅತಿಥಿಗಳಾಗಿದ್ದ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಹರವಿ ಶಂಕರಗೌಡ ಹೇಳಿದರು.ತಂಬೂರಿ ಕಲಾವಿದ ಭೀಮದಾಸ ಗಾಣಧಾಳ ಉದ್ಘಾಟಿಸಿದರು.ಸಹಾಯಕ ಆಯುಕ್ತ ಡಿ.ಪಿ ಚವ್ಹಾಣ, ಅಕಾಡೆಮಿ ಸದಸ್ಯ ಲಂಕೆಪ್ಪ ಭಜಂತ್ರಿ, ಡಾ.ಎಂ.ನಾಗಪ್ಪ ವೇದಿಕೆಯಲ್ಲಿದ್ದರು. ಬಿ.ಎನ್ ಪರಡ್ಡಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.