ADVERTISEMENT

ಜ್ಞಾನ ವರ್ಧನೆ: ಮಕ್ಕಳಿಗೆ ಕಲಾಂ ಕರೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 19:30 IST
Last Updated 7 ಫೆಬ್ರುವರಿ 2011, 19:30 IST

ಬೆಳಗಾವಿ: ‘ಮನೆಯಲ್ಲಿ ವಿದ್ಯಾರ್ಥಿಗಳು ತಮ್ಮದೇ ಆದ ಗ್ರಂಥಾಲಯ ಹೊಂದಬೇಕು. ಆ ಮೂಲಕ ಜ್ಞಾನ ಸಂಪತ್ತನ್ನು ಗಳಿಸಬಹುದು’ ಎಂದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಕರೆ ನೀಡಿದರು.ನಗರದ ಗೋಮಟೇಶ ವಿದ್ಯಾಪೀಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಲ್‌ಐಸಿ ಆಫ್ ಇಂಡಿಯಾ, ನಿಮ್ಸ್ ಪೋಲಿಯೋ ಕ್ಯಾಂಪ್ ಸಮಾರೋಪ ಹಾಗೂ ವಿದ್ಯಾಪೀಠದ ಸುವರ್ಣ ಮಹೋತ್ಸವ ಅಂಗವಾಗಿ ನಿರ್ಮಿಸಿರುವ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳ ಗ್ರಂಥಾಲಯವನ್ನು 20 ಪುಸ್ತಕಗಳಿಂದ ಆರಂಭಿಸಿರಿ. ಅದರಲ್ಲಿ ಕನಿಷ್ಠ ಹತ್ತು ಕೃತಿಗಳು ನೈತಿಕ ಮೌಲ್ಯ ಹೆಚ್ಚಿಸುವ ಪುಸ್ತಕಗಳಾಗಿರಲಿ ಎಂದ ಅವರು, ‘ಮಕ್ಕಳ ಗ್ರಂಥಾಲಯಕ್ಕೆ ಪೋಷಕರು ಪ್ರೋತ್ಸಾಹಿಸಬೇಕು’ ಎಂದು ಸಲಹೆ ಮಾಡಿದರು.

ಕುಟುಂಬದ ಮುಖ್ಯಸ್ಥೆ ತಾಯಿ ಖುಷಿಯಿಂದ ಇದ್ದರೆ, ಇಡೀ ಕುಟುಂಬ ಸಂತೋಷದಿಂದ ಇರುತ್ತದೆ. ಕುಟುಂಬ ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ. ಸಮಾಜ ಚೆನ್ನಾಗಿದ್ದರೆ, ದೇಶ ಚೆನ್ನಾಗಿರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.‘ಸಮಯಕ್ಕೆ ಬಹಳ ಮಹತ್ವ ನೀಡಿ. ಸಮಯ ನಿಮಗಾಗಿ ಕಾಯುವುದಿಲ್ಲ. ಪ್ರತಿ ಕ್ಷಣಕ್ಕೂ ಮಹತ್ವ ನೀಡಬೇಕು. ಏಕತೆಯಿಂದ ಕೆಲಸ ಮಾಡಿದಾಗಲೇ ಶಾಶ್ವತ ಯಶಸ್ಸು ಸಿಗುತ್ತದೆ. ಇಲ್ಲದಿದ್ದರೆ ಸಿಗುವ ಯಶಸ್ಸು ತಾತ್ಕಾಲಿಕವಾಗಿರುತ್ತದೆ’ ಎಂದು ಅವರು ವಿವರಿಸಿದರು.ಗೋಮಟೇಶ ವಿದ್ಯಾಪೀಠದ ಅಧ್ಯಕ್ಷ, ಶಾಸಕರಾದ ಸಂಜಯ ಪಾಟೀಲ ಮತ್ತು ಅಭಯ ಪಾಟೀಲ, ಫಿರೋಜ್ ಸೇಠ, ಎಲ್‌ಐಸಿ ಡಿವಿಜಲ್ ಮ್ಯಾನೇಜರ್ ವಿ.ಜಿ. ನಾಡಗೀರ, ಡಾ.ನರೇಂದ್ರನಾಥ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.