ತರೀಕೆರೆ: ವಾಣಿಜ್ಯ ಬೆಳೆಗಳನ್ನು ಬೆಳೆಯುವತ್ತ ರೈತರು ಮುಖ ಮಾಡಿರುವುದರಿಂದ ನಮ್ಮಲ್ಲಿನ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವ ರೈತರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ.ಕುಮಾರ್ ವಿಷಾದಿಸಿದರು.
ತಾಲ್ಲೂಕಿನ ದೋರನಾಳು ಗ್ರಾಮದ ಶ್ರೀಗಂಧವನದಲ್ಲಿ ಶುಕ್ರವಾರ ಶ್ರೀಗಂಧ ರಕ್ಷಣಾ ವೇದಿಕೆ ಮತ್ತು ತೋಟಗಾರಿಕಾ ಇಲಾಖೆ ಏರ್ಪಡಿಸಿದ್ದ ಜೇನು ಕೃಷಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಡಿಕೆ ಮತ್ತು ತೆಂಗು ಬೆಳೆಯುವ ರೈತರು ಹಾಗೂ ಇನ್ನಿತರ ತರಕಾರಿ ಬೆಳೆಗಳನ್ನು ಬೆಳೆಯುವ ರೈತರು ಜೇನು ಕೃಷಿಯನ್ನು ಅಂತರ ಬೆಳೆಯನ್ನಾಗಿ ಮತ್ತು ಅಡಿಕೆ ಬೆಳೆಗೆ ಪರ್ಯಾಯ ಕೃಷಿಯನ್ನಾಗಿ ಜೇನು ಕೃಷಿಯನ್ನು ಕೈಗೊಳ್ಳುವಂತೆ ಅವರು ರೈತರಿಗೆ ಸಲಹೆ ನೀಡಿದರು. ಜೇನು ಕೃಷಿ ಕುರಿತು ಮಾತನಾಡಿದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸಿದ್ದರಾಜು, ಜೇನು ಕೃಷಿಯಿಂದ ಉತ್ತಮ ಜೇನು ಪಡೆಯುವುದರ ಜತೆಗೆ ತೋಟಗಾರಿಕೆ ಬೆಳೆಯಲ್ಲಿ ಪರಕೀಯ ಪರಾಗಸ್ಪರ್ಶ ಉಂಟಾಗುವುದರಿಂದ ವಾಡಿಕೆ ಬೆಳೆಗಿಂತ ಶೇಕಡಾ 30 ರಷ್ಟು ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ. ಶ್ರೀಗಂಧ ಬೆಳೆಸಲು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಪ್ರೋತ್ಸಾಹ ಧನವನ್ನೂ ಪಡೆಯಬಹುದು ಎಂದರು.
ಜೇನು ಕೃಷಿಯಲ್ಲಿ 40ಕ್ಕೂ ಹೆಚ್ಚು ವರ್ಷದ ಅನುಭವವಿರುವ ಕೃಷಿಕ ಮುಸ್ತಾಫ ಕಾಕಾ ಜೇನು ಸಾಕುವ ಮತ್ತು ಜೇನನ್ನು ಸಂಗ್ರಹಿಸುವ ಕುರಿತು ಪ್ರಾತ್ಯಕ್ಷಿತೆ ಪ್ರರ್ದಶಿಸಿದರು.
ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನೂರಾರು ಜೇನು ಮತ್ತು ಶ್ರೀಗಂಧ ಬೆಳೆಯ ಆಸಕ್ತ ರೈತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.