ತಿಪಟೂರು: ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಬೇಸತ್ತ ತಾಲ್ಲೂಕಿನ ಹಾಲ್ಕುರಿಕೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಗುರುವಾರ ಅಲ್ಲಿನ ವಿದ್ಯುತ್ ವಿತರಣೆ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.
ಸುಮಾರು 10 ದಿನಗಳಿಂದ ದಿನಕ್ಕೆ ಕನಿಷ್ಠ 3 ಗಂಟೆಯೂ ಸರಿಯಾಗಿ ವಿದ್ಯುತ್ ಕೊಡುತ್ತಿಲ್ಲ. ಮನೆಗಳ ಬಳಕೆಗೆ ಮಾತ್ರ ಎರಡು ಫೇಸ್ ವಿದ್ಯುತ್ ಕೊಡುವುದರಿಂದ ಮೋಟಾರ್ಗಳು ಚಾಲನೆಯಾಗದೆ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗಿದೆ. ನೀರಿಗಾಗಿ ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಜನ ವಿದ್ಯುತ್ ವಿತರಣೆ ಕೇಂದ್ರದ ಮುಂದೆ ನೆರೆದು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಿಂದೆಂದೂ ಕಾಣದಷ್ಟು ವಿದ್ಯುತ್ ಕಡಿತ ಮಾಡಿರುವುದರಿಂದ ಒಂದು ಕೊಡ ನೀರು ಸಿಗುವುದೇ ಕಷ್ಟವಾಗಿದೆ ಎಂದು ದೂರಿದರು. ತಕ್ಷಣ ವಿದ್ಯುತ್ ಕೊರತೆ ನಿವಾರಿಸಬೇಕೆಂದು ಪಟ್ಟು ಹಿಡಿದು ಕುಳಿತರು.
ವಿತರಣಾ ಕೇಂದ್ರದ ಸಿಬ್ಬಂದಿ ತಿಪಟೂರು ಕಚೇರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಎಂಜಿನಿಯರ್ ಕರೆಸಿಕೊಂಡರು. ಅಧಿಕಾರಿಗಳು ಗ್ರಾಮಸ್ಥರ ಜತೆ ಮಾತುಕತೆ ನಡೆಸಿ, ವಿದ್ಯುತ್ ಸಮಸ್ಯೆಯನ್ನು ಶೀಘ್ರ ನಿವಾರಿಸುವುದಾಗಿ ಭರವಸೆ ನೀಡಿದರು. ಇಂದಿನಿಂದಲೇ ನಿಗದಿತವಾಗಿ ವಿದ್ಯುತ್ ಪೂರೈಸುವುದಾಗಿ ಒಪ್ಪಿಕೊಂಡರು. ನಂತರ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಭಾನುಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮಾಮಹೇಶ್, ಸುರೇಶ್ಬಾಬು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.