ADVERTISEMENT

ದಾಸಿಮಯ್ಯ ಸಹಸ್ರಮಾನ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2011, 19:30 IST
Last Updated 8 ಏಪ್ರಿಲ್ 2011, 19:30 IST
ದಾಸಿಮಯ್ಯ ಸಹಸ್ರಮಾನ ಜಯಂತ್ಯುತ್ಸವ
ದಾಸಿಮಯ್ಯ ಸಹಸ್ರಮಾನ ಜಯಂತ್ಯುತ್ಸವ   

ಮೊಳಕಾಲ್ಮುರು: ಬಸವಣ್ಣ ಅವರಿಗಿಂತ ಮೊದಲು ವಚನ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ್ದ ದೇವರ ದಾಸಿಮಯ್ಯ ಜನಾಂಗದ ಸಂಘಟನೆ ಕೊರತೆಯಿಂದಾಗಿ ಅನಾವರಣ ಗೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ನೇಕಾರ ಒಕ್ಕೂಟ ಜಿಲ್ಲಾಧ್ಯಕ್ಷ ಪಿ.ಇ. ವೆಂಕಟಸ್ವಾಮಿ ವಿಷಾದಿಸಿದರು.

ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಶುಕ್ರವಾರ ನೇಕಾರ ಒಕ್ಕೂಟ ಹಮ್ಮಿಕೊಂಡಿದ್ದ ಜನಾಂಗದ ಮೂಲ ಪುರುಷ ದೇವರ ದಾಸಿಮಯ್ಯ ಸಹಸ್ರಮಾನ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಸುಮಾರು 80 ಲಕ್ಷ ಜನಸಂಖ್ಯೆ ಹೊಂದಿರುವ ನೇಕಾರ ಜನಾಂಗ ಇಂದು ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತೀರಾ ಹಿಂದಿದೆ. ಇದಕ್ಕೆ ಸಂಘಟನೆ ಕೊರತೆ ಮುಖ್ಯವಾಗಿದೆ. ಅನ್ನ ನೀಡುವ ರೈತ, ಬಟ್ಟೆ ನೀಡುವ ನೇಕಾರ ಎರಡೂ ಪಂಗಡಗಳು ಪ್ರಸ್ತುತ ಸಂಕಷ್ಟ ಸ್ಥಿತಿಯಲ್ಲಿದ್ದು, ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಸ್ಥಳೀಯ ಪಟ್ಟಸಾಲೆ ಸಮಾಜದ ಅಧ್ಯಕ್ಷ ಡಿ. ಷಡಾಕ್ಷರಪ್ಪ ಮಾತನಾಡಿ, ‘ನೇಕಾರ ವೃತ್ತಿಯಲ್ಲಿ ದೈವತ್ವ ಕಂಡ ಮತ್ತು ಅದೇ ವೃತ್ತಿಯಿಂದ ದಾಸೋಹ ನಡೆಸುತ್ತಿದ್ದ ದಾಸಿಮಯ್ಯ ಮಾದರಿಯಾಗಿದ್ದು, ಇದನ್ನು ಬಸವಣ್ಣ ತನ್ನ ವಚನಗಳಲ್ಲಿ ದಾಖಲು ಮಾಡಿರುವುದು ಸಾಕ್ಷಿಯಾಗಿದೆ’ ಎಂದು ಹೇಳಿದರು. ಕಾರ್ಯಕ್ರಮವನ್ನು ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ ಉದ್ಘಾಟಿಸಿದರು. ಶಿಕ್ಷಕ ಬಿ.ಟಿ. ನಾಗಭೂಷಣ ದಾಸಿಮಯ್ಯ ಕುರಿತು ಉಪನ್ಯಾಸ ನೀಡಿದರು.

ತಾ.ಪಂ. ಸದಸ್ಯೆ ಎ. ಸುಶೀಲಮ್ಮ, ಮಾಜಿ ಅಧ್ಯಕ್ಷೆ ರುಕ್ಷ್ಮಿಣಮ್ಮ, ಸದಸ್ಯೆ ಸುಧಾರತ್ನಾ, ಗ್ರಾ.ಪಂ. ಸದಸ್ಯ ಕೆ.ಸಿ. ಮಂಜುನಾಥ್, ಪ.ಪಂ. ಸದಸ್ಯ ಜಿಂಕಾ ಶ್ರೀನಿವಾಸ್, ನಿವೃತ್ತ ಕಂದಾಯ ಅಧಿಕಾರಿ ಮಲ್ಲಿಕಾರ್ಜುನಪ್ಪ, ಬಿ.ಎನ್. ಮಲ್ಲೇಶಪ್ಪ, ವಿ. ವಾಸುದೇವಪ್ಪ ಇದ್ದರು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.