ADVERTISEMENT

ದುರಾಡಳಿತ: ಯುವಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಮೇ 2012, 19:30 IST
Last Updated 17 ಮೇ 2012, 19:30 IST

ಬಳ್ಳಾರಿ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ದುರಾಡಳಿತದಲ್ಲಿ ತೊಡಗಿದ್ದು, ಭ್ರಷ್ಟಾಚಾರ, ಆಂತರಿಕ ಕಹಲದಲ್ಲಿ ಮುಳುಗಿ ಜನರ ಹಿತವನ್ನೇ ಮರೆತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ನಗರದ ತಹಶೀಲ್ದಾರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಸಮಿತಿಯ ನಗರ ಘಟಕದ ಅಧ್ಯಕ್ಷ ಎಚ್.ಮಲ್ಲಿಕಾರ್ಜುನ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಭ್ರಷ್ಟಾಚಾರದ ಆರೋಪದಲ್ಲಿ ತಮ್ಮ ಸ್ಥಾನ ಕಳೆದುಕೊಂಡಿದ್ದರೂ, ಸರ್ಕಾರದಲ್ಲಿ ಮುಂದುವರಿದಿರುವವರ ವರ್ತನೆ ಬದಲಾಗಿಲ್ಲ. ಆರಂಭದಿಂದಲೂ ಆಂತರಿಕ ಕಚ್ಚಾಟದಲ್ಲಿ ನಿರತವಾಗಿರುವ ಶಾಸಕರು, ಸಚಿವರು ರಾಜ್ಯದ ಬಡಜನರ ಹಿತವನ್ನು  ಮರೆತಿದ್ದಾರೆ ಎಂದರು.

ಲೋಕಾಯುಕ್ತರ ನೇಮಕ ಮಾಡದೇ ನಿರ್ಲಕ್ಷ್ಯ ವಹಿಸಿರುವ ಸರ್ಕಾರವು ಸ್ವಜನ ಪಕ್ಷಪಾತ ನಡೆಸುತ್ತ, ಆಡಳಿತದ ದುರ್ಬಳಕೆ ಮಾಡುತ್ತ ಜನರಲ್ಲಿ ಬೇಸರ ಮೂಡಿಸಿದೆ.  22 ಖಾತೆಗಳನ್ನು ಮುಖ್ಯಮಂತ್ರಿ ಯವರೇ ನಿರ್ವಹಿಸುತ್ತ ಜಿಲ್ಲೆಗಳಿಗೆ ಸಚಿವರೇ ಬಾರದ ಸ್ಥಿತಿ ಇದೆ. ಬರಗಾಲ ಪರಿಹಾರ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ. ವಸತಿ, ರಸ್ತೆ, ಕುಡಿಯುವ ನೀರಿನ ಸೌಲಭ್ಯವನ್ನೂ ಸಮರ್ಪಕವಾಗಿ ನೀಡುತ್ತಿಲ್ಲ. ವಿದ್ಯುತ್ ಪೂರೈಕೆಯಲ್ಲೂ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಉಪಾಧ್ಯಕ್ಷ ಪಿ.ವಿನೋದಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ವಿವೇಕ್, ಜಯಲಲಿತಾ, ಚಾಂದ್‌ಬಾಷಾ, ಕೆ.ಮುರುಳಿಕೃಷ್ಣ, ಜೆ.ವಿ.ಮಂಜುನಾಥ, ಯಾಳಗಿ ಮಲ್ಲಿಕಾರ್ಜುನ, ಜಿ.ವಿ. ಮಂಜುನಾಥ, ಎಂ.ನರೇಶ್, ಬಿ.ಲಕ್ಷ್ಮಣ,  ಕೆ.ಅಶೋಕ್, ಕೊಳಗಲ್ ಅಂಜಿನಿ, ಗೋವಿಂದ ಹಾಜರಿದ್ದರು. ಇದೇ ವೇಳೆ ತಹಶೀಲ್ದಾರ ಕಚೇರಿಯೊಳಗೆ ನುಗ್ಗಲು ಯತ್ನಿಸಿದ 50ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.