ADVERTISEMENT

ನೀರಿನ ಖಾಸಗೀಕರಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:50 IST
Last Updated 24 ಮಾರ್ಚ್ 2011, 19:50 IST
ನೀರಿನ ಖಾಸಗೀಕರಣಕ್ಕೆ ವಿರೋಧ
ನೀರಿನ ಖಾಸಗೀಕರಣಕ್ಕೆ ವಿರೋಧ   

ದೊಡ್ಡಬಳ್ಳಾಪುರ: ಪ್ರಕೃತಿದತ್ತವಾದ ನೀರನ್ನು ಸರ್ಕಾರ ನಿರ್ವಹಣೆ ಮಾಡಬಹುದೇ ಹೊರತು ಪರಭಾರೆ ಮಾಡುವ ಹಕ್ಕು ಇಲ್ಲ ಎಂದು ಸರ್ವೋಚ್ಫ ನ್ಯಾಯಾಲಯ ಸ್ಪಷ್ಟಪಡಿಸಿದೆ ಎಂದು ಜನಾಂದೋಲನ ಕರ್ನಾಟಕದ ಸ್ವಯಂ ಸೇವಾ ಸಂಸ್ಥೆಯ ಎಂ.ಆರ್.ಪ್ರಭಾಕರ್ ತಿಳಿಸಿದರು. ದೊಡ್ಡಬಳ್ಳಾಪುರ ಅಭಿವೃದ್ದಿ ಸಮಿತಿ ಮತ್ತು ಲಯನ್ಸ್ ಕ್ಲಬ್ ವತಿಯಿಂದ ನಡೆದ  ವಿಶ್ವ ಜಲ ದಿನಾಚರಣೆ  ಕಾರ್ಯಕ್ರಮದಲ್ಲಿ ’ನೀರಿನ ಖಾಸಗೀಕರಣ ಮತ್ತು ದುಷ್ಪರಿಣಾಮ ಹಾಗೂ ಬಡ ಜನರ ಮೇಲಾಗುವ ಆರ್ಥಿಕ ಪರಿಣಾಮಗಳು’ ಕುರಿತು ಮಾತನಾಡಿದರು.
 

ಕಳೆದ 10 ರ್ವಗಳಿಂದಲೂ ಕುಡಿಯುವ ನೀರಿನ ಯೋಜನೆ ನೆಪದಲ್ಲಿ ರಾಜ್ಯದ ಕೆರೆ, ಕುಂಟೆ, ನದಿಗಳನ್ನು ನುಂಗುತ್ತಿರುವ ಬಗ್ಗೆ ಸಾರ್ವಜನಿಕರು ಸಕಾಲದಲ್ಲಿ ಎಚ್ಚರಗೊಳ್ಳಬೇಕಾಗಿದೆ ಎಂದರು.
ರಾಜ್ಯ ಸರ್ಕಾರ ಸತತವಾಗಿ ಒಂದಲ್ಲಾ ಒಂದು ನೀರಿನ ಖಾಸಗೀಕರಣದ ಯೋಜನೆಗೆ ಸಹಿ ಮಾಡುತ್ತಲೆ ಬಂದಿದೆ. ನೀರಿನ ವಾಣಿಜ್ಯೀಕರಣವನ್ನು ಬಹುರಾಷ್ಟ್ರೀಯ ಕಂಪೆನಿಗಳು ವ್ಯವಸ್ಥಿತವಾಗಿ ಮಾಡುತ್ತಿವೆ. ಸರ್ಕಾರಗಳು ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲಕರವಾಗುವ ಕಾನೂನುಗಳನ್ನು ಮತ್ತು ಕಾನೂನುಗಳಿಗೆ ತಿದ್ದುಪಡಿ ಮಾಡಿಕೊಡುತ್ತಿರುವುದು ಎಲ್ಲರೂ ತಿಳಿದ ವಿಷಯ ಎಂದರು. 
 

ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ಎನ್.ನಾಗರಾಜ್ ಮಾತನಾಡಿ, 1992ರಲ್ಲಿ ಬ್ರಿಜಿಲ್ ದೇಶದ ರಿಯೋ-ಡಿಜನೈರೋದಲ್ಲಿ ನಡೆದ ವಿಶ್ವ ಸಂಸ್ಥೆ ಪರಿಸರ ಸಮ್ಮೇಳನದಲ್ಲಿ ನಿರ್ಮಲ ಜಲಮೂಲಗಳ ರಕ್ಷಣೆಗಾಗಿ ತೆಗೆದುಕೊಂಡ ನಿರ್ಣಯದಂತೆ 1993ರ ಮಾರ್ಚ್ 22 ರಿಂದ ಪ್ರತಿ ವರ್ಷವೂ ‘ವಿಶ್ವ ಜಲ ದಿನ’ ಆಚರಿಸಲಾಗುತ್ತಿದೆ. ದೇಶದ ಅಭಿವೃದ್ಧಿ, ಜನರ ಆರೋಗ್ಯ ಹಾಗೂ ಪರಿಸರದ ವಿಷಯದಲ್ಲಿ ಜಲ ನೈರ್ಮಲ್ಯ ಅವಿಭಾಜ್ಯ ಅಂಗವಾಗಿದೆ. ಪ್ರಕೃತಿಯು ಯಾವುದೇ ರೀತಿಯಾ ನಿರೀಕ್ಷೆಯಿಲ್ಲದೆ ಭೂಮಿ ಮೇಲೆ ಜೀವಿಸುವಂತಹ ಎಲ್ಲಾ ಜೀವ ಜಂತುಗಳ ಆಶ್ರಯವಾಗಿದೆ ಎಂದರು.  

ಸ್ವರಾಜ್ ಸಂಸ್ಥೆ ಉಪನಿರ್ದೇಶಕ ಮೋಹನ್ ಪಾಲ್, ದೊಡ್ಡಬಳ್ಳಾಪುರ ಅಭಿವೃದ್ದಿ ಸಮಿತಿ ಸಂಚಾಲಕರಾದ ಡಿ.ಆರ್. ನಟರಾಜ್,ಎನ್.ಸಿ.ಲಕ್ಷ್ಮಿ, ನಗರಸಭೆ ನೀರು ಸರಬರಾಜು ವಿಭಾಗದ ಕಿರಿಯ ಅಭಿಯಂತರ ಡಿ. ರಾಮೇಗೌಡ  ಇತರರು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.