ADVERTISEMENT

ಪಕ್ಷ ಕಳಂಕ ರಹಿತ: ಡಿ.ವಿ. ಸದಾನಂದಗೌಡ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ಮಡಿಕೇರಿ:  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷ ತ್ಯಜಿಸಿದರೆ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಬಿಜೆಪಿಯು ಯಾರೊಬ್ಬರನ್ನೂ ಅವಲಂಬಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ  ಹೇಳಿದರು.

ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ಕುಟುಂಬ ಸಮೇತರಾಗಿ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಪಕ್ಷಕ್ಕೆ ಯಾರು ಕೂಡ ಅನಿವಾರ್ಯವಲ್ಲ. ಬಿಜೆಪಿ ತೊರೆದರೆ ಯಡಿಯೂರಪ್ಪ ಅವರಿಗೆ ಭವಿಷ್ಯವಿಲ್ಲ. ಪಕ್ಷದಲ್ಲಿ 120 ಶಾಸಕರೂ ಜೊತೆಗೆ ಇರುತ್ತಾರೆ. ಬಿಟ್ಟು ಹೋಗುವಾಗ ಒಬ್ಬರೂ ಜೊತೆಗೆ ಬರಲಿಕ್ಕಿಲ್ಲ ಎಂದರು.

ಬಿಜೆಪಿ ಬಿಡುತ್ತಿರುವವರು ಕಳಂಕಿತರಾದವರು. ಅವರು ಬಿಟ್ಟ ನಂತರ ಪಕ್ಷ ಕಳಂಕ ರಹಿತವಾಗಲಿದೆ ಎಂದರು.
ಯಡಿಯೂರಪ್ಪಗೆ ನೋವಾಗಿದ್ದರೆ ಪಕ್ಷದ ನಾಯಕರ ಜತೆ ಚರ್ಚಿಸಿ ಸರಿಪಡಿಸಿಕೊಳ್ಳಬಹುದು. ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ನಿವಾರಿಸಿಕೊಂಡು ಹೋದರೆ ಮುಂದೆಯೂ ಅಧಿಕಾರ ಪಡೆಯಬಹುದು.
 
ಆ ನಿಟ್ಟಿನಲ್ಲಿ ಯೋಚಿಸುವುದು ಒಳಿತು. ಇನ್ನೂ ಕಾಲ ಮಿಂಚಿಲ್ಲ. ತಾಳ್ಮೆ ವಹಿಸುವುದು ಅಗತ್ಯ. ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಲ್ಲಿ ಪಕ್ಷದಿಂದ ಹೊರ ನಡೆದವರು ಮರಳಿ ಪಕ್ಷಕ್ಕೆ ಬಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಕಳೆದ ನಾಲ್ಕುವರೆ ವರ್ಷಗಳಲ್ಲಿ ಮೂರು ಜನ ಮುಖ್ಯಮಂತ್ರಿಗಳಾದರೂ ರಾಜ್ಯದ ಅಭಿವೃದ್ಧಿ ಮೇಲೆ ಯಾವುದೇ ರೀತಿಯ ಪ್ರತಿಕೂಲ ಪರಿಣಾಮ ಉಂಟಾಗಿಲ್ಲ. ಜನರು ಮೆಚ್ಚುವಂತಹ ಸರ್ಕಾರವನ್ನು ಪಕ್ಷ ನೀಡಿದೆ ಎಂದರು.
ಕೇಂದ್ರ ಸರ್ಕಾರದಲ್ಲಿ ನಡೆದಿರುವ ದೊಡ್ಡ ಹಗರಣಗಳ ಬಗ್ಗೆ ಚಕಾರ ಎತ್ತದ ಇಲ್ಲಿನ ಕಾಂಗ್ರೆಸ್ ನಾಯಕರು ರಾಜ್ಯದ ಸಣ್ಣಪುಟ್ಟ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.