ಶಿವಮೊಗ್ಗ: ಅಡಿಕೆಗೆ ಇಂದು ಆಪತ್ತು ಎದುರಾಗಿದೆ. ಆದ್ದರಿಂದ ಬೆಳೆಗಾರರು ಪರ್ಯಾಯ ಬೆಳೆಗಳತ್ತ ಮುಖ ಮಾಡುವ ತುರ್ತಿದೆ ಎಂದು ಪ್ರಗತಿಪರ ಕೃಷಿಕ ಬಿ.ಎಂ. ಸುಂದರೇಶ್ ಅಬ್ಲಿಗೆರೆ ತಿಳಿಸಿದರು.
ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ಮಂಗಳೂರಿನ ಕ್ಯಾಂಪ್ಕೋ ಮತ್ತು ಶಿವಮೊಗ್ಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ‘ಕೊಕ್ಕೋ ಕೃಷಿ, ಸಂಸ್ಕರಣೆ ಮತ್ತು ಮಾರಾಟ’ ಕುರಿತ ಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಗುಟ್ಕಾ ಸ್ಯಾಷೆ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಆಘಾತವಾಗಿದೆ. ಇದರಿಂದ ಹೊರಬರಲು ರೈತರು ಉಪ ಬೆಳೆಗಳಿಗೆ ಮೊರೆ ಹೋಗಬೇಕು. ಅಡಿಕೆಗೆ ಪರ್ಯಾಯ ಬೆಳೆಯಾದ ಕೊಕ್ಕೋ ಬೆಳೆಯಲು ಆಸಕ್ತಿ ತೋರಬೇಕು ಎಂದು ಸಲಹೆ ನೀಡಿದರು.
ಪ್ರಗತಿಪರ ಕೃಷಿಕ ಸುರೇಶ್ ಅಗರದಹಳ್ಳಿ ಮಾತನಾಡಿ, ಅಡಿಕೆ ಸಂಸ್ಕರಣೆಗೆ ಕಾರ್ಮಿಕರ ಅವಶ್ಯಕತೆ ಇದೆ. ಆದರೆ, ಕೊಕ್ಕೋವನ್ನು ಕುಟುಂಬದ ಸದಸ್ಯರೇ ಸಂಸ್ಕರಿಸಬಹುದು ಎಂದರು.
ಸಸ್ಯರೋಗಶಾಸ್ತ್ರದ ಪ್ರಾಧ್ಯಾಪಕ ಡಾ.ಎಚ್. ನಾರಾಯಣಸ್ವಾಮಿ, ತೋಟಗಾರಿಕಾ ವಿಭಾಗದ ಕೆ.ಎಸ್. ಶೇಷಗಿರಿ, ಕ್ಯಾಂಪ್ಕೋ ವಲಯಾಧಿಕಾರಿ ಪಿ.ಕೆ. ಸೂರ್ಯನಾರಾಯಣ ಉಪಸ್ಥಿತರಿದ್ದರು.
ಕ್ಯಾಂಪ್ಕೋ ಹಿರಿಯ ಅಧಿಕಾರಿ ಪಿ. ಶ್ಯಾಮ್ ಭಟ್ ಪ್ರಾಸ್ತಾವಿಕ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.