ADVERTISEMENT

ಪುಂಡಾನೆ ದಾಳಿಗೆ ರೈತ ಬಲಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST

ತುಮಕೂರು: ಮೂರ್ನಾಲ್ಕು ತಿಂಗಳಿಂದ ನಗರದ ಸುತ್ತಮುತ್ತಲ ಗ್ರಾಮಗಳಲ್ಲೇ ಬೀಡು ಬಿಟ್ಟಿರುವ ಮೂರು ಕಾಡಾನೆಗಳು ರೈತರೊಬ್ಬರನ್ನು ದಂತದಿಂದ ತಿವಿದು ಸಾಯಿಸಿದ ಘಟನೆ ಶುಕ್ರವಾರ ತಡರಾತ್ರಿ ಸಮೀಪದ ಗೊಲ್ಲಹಳ್ಳಿಯಲ್ಲಿ ನಡೆದಿದೆ.

 ಗೊಲ್ಲಹಳ್ಳಿ ವಾಸಿ ಬಸವರಾಜು (50) ಮೃತಪಟ್ಟ ರೈತ. ಕಳೆದ ಕೆಲ ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಅರಣ್ಯಕ್ಕೆ ಅಟ್ಟುವ ಪ್ರಯತ್ನ ನಡೆಸುತ್ತಿದ್ದರು. ಶುಕ್ರವಾರ ರಾತ್ರಿ ಗೊಲ್ಲಹಳ್ಳಿ ಬಳಿ ಬೀಡು ಬಿಟ್ಟಿದ್ದ ಆನೆಗಳು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಬಸವರಾಜು ಪಕ್ಕೆಗೆ ದಂತದಿಂದ ತಿವಿದು, ಬಿಸಾಡಿವೆ.

 ತೀವ್ರ ರಕ್ತಸ್ರಾವದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಬಸವರಾಜು ಅವರಿಗೆ ಸಿದ್ಧಾರ್ಥ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟರು ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಇದೇ ಆನೆಗಳು 15 ದಿನಗಳ ಹಿಂದೆ ಮಲ್ಲಸಂದ್ರ ಪಕ್ಕದ ಗ್ರಾಮದಲ್ಲಿ ರಾಗಿ ಕಣದಲ್ಲಿ ಬೆಳೆ ಕಾಯಲು ಮಲಗಿದ್ದ ಇಬ್ಬರು ಸಹೋದರರ ಮೇಲೆ ದಾಳಿ ಮಾಡಿ ತೀವ್ರ ಗಾಯಗೊಳಿಸಿದ್ದವು.

ರೈತನ ಸಾವಿನಿಂದ ಕುಪಿತಗೊಂಡಿರುವ ಗೊಲ್ಲಹಳ್ಳಿ ಗ್ರಾಮಸ್ಥರು ಸಿದ್ದಾರ್ಥ ಆಸ್ಪತ್ರೆಗೆ ಗಾಯಾಳು ನೋಡಲು ಬಂದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ದಿಗ್ಬಂಧನ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.