ADVERTISEMENT

ಪೊಲೀಸರಿಗೆ ಸಹಕಾರ ನೀಡಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಕೋಲಾರ: ಕಾನೂನು ಸುವ್ಯವಸ್ಥೆ ಕಾಪಾಡಲು, ಅಪರಾಧ ಪತ್ತೆ ಹಚ್ಚಲು, ನಿಯಂತ್ರಿಸಲು ಪೊಲೀಸರಿಗೆ ನಾಗರಿಕರು ಸಹಕಾರ ನೀಡುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅಭಿಪ್ರಾಯಪಟ್ಟರು.

ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪೊಲೀಸರಿಗೆ ತಮ್ಮ ಶಕ್ತಿ ಮತ್ತು ಕರ್ತವ್ಯದ ಮೇಲೆ ಅಚಲ ನಂಬಿಕೆ ಇರುವಂತೆ ಸಮುದಾಯಕ್ಕೂ ಪೊಲೀಸರ ಮೇಲೆ ಅಚಲ ನಂಬಿಕೆ ಬೆಳೆಯಬೇಕು ಎಂದರು.

ದೇಶದಲ್ಲಿ ಆತಂಕವಾದ ತೀವ್ರಗೊಳ್ಳುತ್ತಿದೆ. ಸಮಾಜದ ನಾಗರಿಕರ ಪ್ರಾಣ ರಕ್ಷಣೆಗೆ ಹೋರಾಟ ನಡೆಸುವ ಪೊಲೀಸರ ಸೇವೆ ಮತ್ತು ರಾಷ್ಟ್ರಾಭಿಮಾನ ಯಾವತ್ತಿಗೂ ಶ್ಲಾಘನೀಯವಾದದ್ದು. ಸಮಾಜಘಾತುಕ ಶಕ್ತಿಗಳ ದಮನದ ಸಂದರ್ಭದಲ್ಲಿ ಪೊಲೀಸರಿಗೆ ಸಮಾಜದ ಪ್ರೋತ್ಸಾಹ ಸಿಕ್ಕರೆ ಮತ್ತಷ್ಟು ಸುಂದರ, ಶಾಂತಿಯುತ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸೆಪಟ್, ನಗರಸಭೆ ಅಧ್ಯಕ್ಷೆ ನಾಜಿಯಾ, ಲಿಯಾಖತ್, ಜಿಲ್ಲಾ ಶಾಂತಿ ಸಮಿತಿಯ ಶ್ರೀಕೃಷ್ಣ, ಕೆ.ಪ್ರಹ್ಲಾದರಾವ್ ಸೇರಿದಂತೆ ಹಲವು ಗಣ್ಯರು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಛವಿರಿಸಿ ಗೌರವ ಸಲ್ಲಿಸಿದರು.

ಡಿವೈಎಸ್‌ಪಿ ಶ್ರೀಹರಿ ಬರಗೂರು, ಸಬ್‌ಇನ್‌ಸ್ಪೆಕ್ಟರ್‌ಗಳಾದ ಎಂ.ಅಂಬರೀಷ್, ದೇವೇಂದ್ರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.