ADVERTISEMENT

ಪೊಲೀಸ್ ದೌರ್ಜನ್ಯ; ಇರಾನಿ ಮಹಿಳೆಯರ ಆರೋಪ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ಬೀದರ್: ಪೊಲೀಸರು ನಮ್ಮ ಮನೆಗಳಿಗೆ ನುಗ್ಗಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಬೀದರ್ ನಗರದ ಇರಾನಿ ಕಾಲೊನಿಯ ಮಹಿಳೆಯರು ಶನಿವಾರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

`ಆರೋಪಿಗಳು, ತಪ್ಪಿತಸ್ಥರನ್ನು ಕರೆದುಕೊಂಡು ಹೋಗಲು ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಮನೆಯೊಳಕ್ಕೆ ನುಗ್ಗಿದ ಪೊಲೀಸರು ಮಹಿಳೆಯರು, ಮುದುಕರು, ಮಕ್ಕಳ ಮೇಲೆಯೂ ಲಾಠಿ ಪ್ರಹಾರ ನಡೆಸಿದರು. ಜೊತೆಗೆ ಕೂಡಿಟ್ಟಿದ್ದ ಚಿನ್ನದ ಆಭರಣ ಕಿತ್ತುಕೊಂಡು ಹೋದರು. ಮಾತನಾಡಲು ಅವಕಾಶವೇ ಇಲ್ಲದಂತೆ ದಬ್ಬಾಳಿಕೆ ನಡೆಸಿದರು. ಇಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ~ ಎಂದು ನಗರಸಭೆ ಸದಸ್ಯೆ ಫಾತೀಮಾ ಅನ್ವರ್ ಅಲಿ ಆರೋಪಿಸಿದರು.

`ಯಾವುದೇ ಸೂಚನೆ, ಅನುಮತಿ ಇಲ್ಲದೆ ಮನೆಗಳಿಗೆ ನುಗ್ಗಿದ್ದಾರೆ. ಮಹಿಳೆಯರ ಮಂಗಳಸೂತ್ರ, ಒಡವೆ ಕಿತ್ತುಕೊಂಡಿದ್ದಾರೆ. ದಾಳಿಗೆ ಕಾರಣ ತಿಳಿಸದೆ ಜನರ ಮೇಲೆ ಹಲ್ಲೆ ನಡೆಸಿದ್ದಾರೆ. ಇದೊಂದು ಅಮಾನವೀಯ ಕೃತ್ಯ~ ಎಂದು ಹೇಳಿದರು.

`ನನ್ನ ಗಂಡ ತೀರಿಕೊಂಡಿದ್ದಾನೆ. ಒಬ್ಬಳೇ ಮಗನೊಂದಿಗೆ ಬದುಕುತ್ತಿದ್ದೇನೆ. ಐದು ವರ್ಷದ ಮಗುವಿನ ಕುತ್ತಿಗೆ ಹಿಸುಕುವುದಾಗಿ ಬೆದರಿಸಿದ ಪೊಲೀಸರು ಚಿನ್ನದ ಆಭರಣ ಕಿತ್ತುಕೊಂಡು ಹೋದರು. ಅದರ ಜೊತೆಗೆ ಇದ್ದ ರಸೀದಿ ಕೂಡ ಹರಿದು ಹಾಕಿದರು~ ಎಂದು ಜೈನಾಬ್ ವಿವರಿಸಿದಳು.

`ನಮಗೂ ಇರಾನಿಗಳಿಗೂ ಯಾವುದೇ ಸಂಬಂಧ ಇಲ್ಲ. ಆದರೆ, ಅವರ ಮನೆಗಳ ಪಕ್ಕದಲ್ಲಿ ಇರುವ ಕಾರಣಕ್ಕಾಗಿಯೇ ನಮ್ಮ ಮನೆಯೊಳಕ್ಕೂ ಪೊಲೀಸರು ನುಗ್ಗಿ ಬಂದರು. ರಾತ್ರಿಯೆಲ್ಲ ನಿದ್ದೆಯಿಲ್ಲದೆ ಆತಂಕದಿಂದ ಕಳೆಯಬೇಕಾಯಿತು~ ಎಂದು ಶಕುಂತಲಾಬಾಯಿ ಬಾಬುರಾವ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.