ADVERTISEMENT

ಪ್ರಜಾಪ್ರಭುತ್ವ ಕಟ್ಟುವಲ್ಲಿ ಮತದಾರರದ್ದೇ ಪಾತ್ರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಹನುಮಸಾಗರ: ಮುಕ್ತ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಸುವಲ್ಲಿ ಕರಾರುವಾಕ್ಕಾದ ಮತ್ತು ದೋಷರಹಿತ ಮತದಾರರ ಪಟ್ಟಿ ಮಹತ್ವದ್ದಾಗಿದೆ. ಅದನ್ನು ಮತಗಟ್ಟೆ ಅಧಿಕಾರಿಗಳು ನೈಜವಾಗಿ ತಯಾರಿಸುವುದು ಅವಶ್ಯ ಎಂದು ತಹಶೀಲ್ದಾರ ವೀರೇಶ ಬಿರಾದಾರ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ ಶನಿವಾರ ಏರ್ಪಡಿಸಿದ ರಾಷ್ಟ್ರೀಯ ಮತದಾರರ ದಿನಾಚರಣೆಯ ಮಹತ್ವ ಕುರಿತ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರೂ ಪಾಲ್ಗೊಳ್ಳುವುದು ಅವಶ್ಯವಾಗಿದೆ. ಜ.25ರಂದು ಪ್ರತಿಯೊಂದು ಮತಗಟ್ಟೆಯಲ್ಲಿ ಆಚರಿಸುವ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ನಿಮ್ಮ ಬೂತ್ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರಿಗೆ ಮತದಾರರ ಜವಾಬ್ದಾರಿ ಹಾಗೂ ಅವರ ಮಹತ್ವ ಕುರಿತು ಮಾಹಿತಿ ನೀಡಬೇಕು ಎಂದು ಹೇಳಿದರು.

ಶಿರಸ್ತೇದಾರ ಸುರೇಶ ಕುಲಕರ್ಣಿ ಮಾತನಾಡಿ ಉತ್ತಮ ಸಮಾಜ ಹಾಗೂ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ನಡೆಯಲಿರುವ ಈ ಕಾರ್ಯದಲ್ಲಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಯುವಕರು ಹಾಗೂ ಶಾಲಾ ಮುಖ್ಯಸ್ಥರ ಸಹಭಾಗಿತ್ವ ಅವಶ್ಯ ಎಂದು ಹೇಳಿದರು.ಬಳಿಕ ಅವರು ಬ್ಲಾಕ್ ಮಟ್ಟದ ಅಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಕಂದಾಯ ನಿರೀಕ್ಷಕರಾದ ಮಹ್ಮದ್ ಮುಸ್ತಾಫ್, ಸೋಮಶೇಖರಯ್ಯ, ಗ್ರಾಮ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಶ್ರೀನಿವಾಸ ಜಹಗೀರದಾರ ಇತರರು ಇದ್ದರು. ಪಾರ್ವತಿ ಪ್ರಾರ್ಥಿಸಿದರು. ರಾಜೇಸಾಬ ನದಾಫ್ ಸ್ವಾಗತಿಸಿದರು, ಪ್ರಹ್ಲಾದ ಮಠದ ನಿರೂಪಿಸಿದರು. ಚಂದಪ್ಪ ಹಕ್ಕಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.