ADVERTISEMENT

ಪ್ರತಿಭೆಗಳಿಗೆ ಸಿಗದ ಅವಕಾಶ: ಬೋಪಯ್ಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಗೋಣಿಕೊಪ್ಪಲು: ಕೊಡಗಿನ ಅರಣ್ಯ ರಕ್ಷಿಸಿಕೊಂಡು ಬರುತ್ತಿರುವ ಗಿರಿಜನರಲ್ಲಿ ಅಪ್ರತಿಮ ಪ್ರತಿಭೆ ಇದೆ. ಇವರಿಗೆ ಸೂಕ್ತ ಅವಕಾಶ ಲಭಿಸಿದರೆ ಎಲ್ಲ ಕ್ಷೇತ್ರದಲ್ಲಿಯೂ ಮುಂದೆ ಬರಬಲ್ಲರು ಎಂದು ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ ತಿಳಿಸಿದರು.

ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಬುಡಕಟ್ಟು ಜನರ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಗಿರಿಜನ ಕ್ರೀಡಾಪಟುಗಳನ್ನು ಸೋಮವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.

ಮನುಷ್ಯ ಜನಾಂಗದ ನಡುವೆ ಹಲವು ವೈರುಧ್ಯಗಳಿವೆ. ಇಂದಿನ ಸಾಮಾಜಿಕ ವ್ಯವಸ್ಥೆ ಅರ್ಹರಿಗೆ ಅವಕಾಶ ವಂಚಿತರನ್ನಾಗಿ ಮಾಡಿದೆ. ಎಲ್ಲರೂ ಕೈಜೋಡಿಸಿ ಸಾಮಾಜಿಕ ವ್ಯವಸ್ಥೆ ಬದಲಾವಣೆಗೆ ಯತ್ನಿಸಬೇಕು ಎಂದು ತಿಳಿಸಿದರು.

ವನವಾಸಿ ಕ್ರೀಡಾಕೂಟದ ಸಂಚಾಲಕ ಪಿ.ಎ.ಪ್ರಭುಕುಮಾರ್ ಮಾತನಾಡಿ, ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ ಜಿಲ್ಲೆಯಿಂದ 94 ಮಂದಿ ಪಾಲ್ಗೊಂಡಿದ್ದರು. ಇವರಲ್ಲಿ 27 ಮಂದಿ ವಿಜೇತರಾಗಿ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ ಸೌಮ್ಯ ಮತ್ತು ರಾಜೇಶ್ವರಿ ತಂಡದವರು ರಿಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಕೆ.ದಿನೇಶ್, ಜಿ.ಪಂ. ಸದಸ್ಯ ಮಣಿನಂಜಪ್ಪ, ಸ್ಥಳೀಯ ಗ್ರಾ.ಪಂ. ಅಧ್ಯಕ್ಷೆ ರೇಖಾಶ್ರೀಧರ್ ಇತರರು ಇದ್ದರು.

ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಬೆಳ್ಳಿಹಾಡಿಯ ರಾಜು, ತಿಮ್ಮಯ್ಯ, ಅಪ್ಪಿ, ಕರಡಿಕೊಪ್ಪ ಹಾಡಿಯ ವಿಶ್ವನಾಥ್, ವೆಂಕಟೇಶ್, ದೊಡ್ಡರೇಷ್ಮೆಹಾಡಿಯ ಪಾಪು, ಹರೀಶ್, ಮರಪಾಲ ಹಾಡಿಯ ಸುರೇಶ್ ಅವರನ್ನು ಸನ್ಮಾನಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.