ಕುಮಟಾ: ಅರಣ್ಯ ಮಹಾವಿದ್ಯಾಲಯ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ದಲ್ಲಿ ಕಳೆದ 25 ವರ್ಷಗಳಿಂದ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಲೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದ ತಾಲ್ಲೂಕಿನ ಕಾಗಾಲ ಗ್ರಾಮದ ಡಾ.ನಾಗೇಶ ನಾಯ್ಕ ಅವರು ವೃತ್ತಿ ತೊರೆದು ಜೆಡಿಎಸ್ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ‘ಹಣ್ಣುಗಳ ವಿಜ್ಞಾನ’ ವಿಭಾಗ ಮುಖ್ಯಸ್ಥರಾಗಿರುವ ನಾಗೇಶ ಅವರು ಹಿಂದೆ ಶಿರಸಿ ಅರಣ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಸೇವೆಯಲ್ಲಿರುವಾಗಲೇ 1992 ರಲ್ಲಿ ಕುಮಟಾದಲ್ಲಿ ‘ಜನ ಜಾಗೃತಿ ವೇದಿಕೆ’ ಹುಟ್ಟು ಹಾಕಿ ಕುಡಿಯುವ ನೀರು ಸಮಸ್ಯೆ ನಿವಾರಣೆ, ಕುಮಟಾಕ್ಕೆ ಹೊಸ ಸರ್ಕಾರಿ ಆಸ್ಪತ್ರೆ ಆಗುವ ಬಗ್ಗೆ ದನಿ ಎತ್ತಿದ್ದರು. ಅಳ್ವೆಕೋಡಿಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣದ ಸೌಲಭ್ಯ ದೊರಕಿಸಿಕೊಡುವ ಉದ್ದೇಶದಿಂದ ಸಮಾನ ಮನಸ್ಕರೊಂದಿಗೆ ಸೇರಿ ‘ಅಕ್ಷಯ ಶಿಕ್ಷಣ ಸಂಸ್ಥೆ’ ಅಡಿಯಲ್ಲಿ ಅಕ್ಷಯ ಪ್ರೌಢಶಾಲೆ ಆರಂಭಕ್ಕೂ ಕಾರಣ ಕರ್ತರಾಗಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಹಿಂದಿನಿಂದಲೂ ಸಂಪರ್ಕ ಹೊಂದಿದ್ದಾರೆ.
‘ವಿದ್ಯಾವಂತರು ಹಾಗೂ ಉನ್ನತ ಶಿಕ್ಷಣ ಹೊಂದಿ ದವರು ಇಂದು ರಾಜಕೀಯಕ್ಕೆ ಬರುವ ಅಗತ್ಯವಿದೆ. ರಾಜಕೀಯಕ್ಕೆ ಬರುವ ವಿದ್ಯಾ ವಂತರಲ್ಲದ ಅನೇಕರಿಗೆ ಸಮಾಜದ ಅಭಿವೃದ್ಧಿಯ ಒಳನೋಟದ ಕೊರತೆ ಇರುತ್ತದೆ. ಸುಸಂಸ್ಕೃತ ನಡೆಯ ಯುವ ಪೀಳಿಗೆಯನ್ನು ಪ್ರತಿನಿಧಿಸಲು ಅಂತವರು ವಿಫಲರಾಗುತ್ತಾರೆ. ಸರ್ಕಾರಿ ಸೇವೆಯಲ್ಲಿ ಸುಮಾರು 27 ವರ್ಷ ಕಳೆದ ನಂತರ ಉಳಿದ ಕೊಂಚ ಅವಧಿಯನ್ನು ರಾಜಕೀಯದಲ್ಲಿ ಯಾಕೆ ತೊಡಗಿಸಿಕೊಳ್ಳಬಾರದು ಎನಿಸಿದೆ.
ಹಿಂದೆ ನಮ್ಮ ‘ಜನ ಜಾಗೃತಿ’ ವೇದಿಕೆಯ ಕಾರ್ಯಕ್ರಮಗಳಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಬಂದಿದ್ದರು. ಜಿಲ್ಲೆಯ ಸಮಸ್ಯೆಗಳ ಚರ್ಚೆ ಕಾರ್ಯಕ್ರಮದಲ್ಲಿ ಸಚಿವ ಆರ್.ವಿ.ದೇಶಪಾಂಡೆ ಸಹ ಪಾಲ್ಗೊಂಡಿದ್ದರು. ಕಳೆದ 25 ವರ್ಷಗಳಿಂದ ಸಂಪರ್ಕದಲ್ಲಿರುವ ದೇವೇಗೌಡರ ಮಾರ್ಗದರ್ಶನ ಹಾಗೂ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ನಂಬಿಕೆ ಇರುವುದರಿಂದ ಜೆಡಿಎಸ್ಲ್ಲಿ ತೊಡಗಿಸಿಕೊಳ್ಳುವ ನಿರ್ಧಾರಕ್ಕೆ ಬಂದಿ ದ್ದೇನೆ’ ಎನ್ನುತ್ತಾರೆ ನಾಗೇಶ ನಾಯ್ಕ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.