ADVERTISEMENT

ಫಲಾನುಭವಿ ಆಯ್ಕೆ ಕ್ರಮಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ಹಿರೇಕೆರೂರು: ಸುವರ್ಣ ಭೂಮಿ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸರ್ಕಾರವು  ಸಹಾಯಧನ ನೀಡುವುದಕ್ಕಾಗಿ ಫಲಾನುಭವಿಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡುವ ಕ್ರಮವು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಸೋಮವಾರ ರೈತ ಸಂಘದ ತಾಲ್ಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಅರ್ಪಿಸಲಾಯಿತು.

ನೇತೃತ್ವ ವಹಿಸಿದ್ದ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ವಿ.ಕೆಂಚಳ್ಳೇರ, ’ತಾಲ್ಲೂಕಿನಲ್ಲಿ 33 ಸಾವಿರ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಇವರಲ್ಲಿ ಕೇವಲ ಐದು ಸಾವಿರ ರೈತರಿಗೆ ಚೀಟಿ ಎತ್ತುವ ಮೂಲಕ ತಲಾ ರೂ. 10 ಸಾವಿರ ಸಹಾಯಧನ ನೀಡಲು ಮುಂದಾಗಿರುವುದರಿಂದ ಉಳಿದ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ’ ಎಂದು ಆರೋಪಿಸಿದರು.

ಎಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸರ್ಕಾರ ಸಹಾಯ ಧನ ನೀಡಬೇಕು. ಸಾಧ್ಯವಾಗದಿದ್ದಲ್ಲಿ ಪ್ರತಿ ರೈತರಿಗೆ ತಲಾ ರೂ. 2 ಸಾವಿರವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಬಸನಗೌಡ ಗಂಗಪ್ಪಳವರ, ಬಿ.ಬಿ.ಹಂಚಿನಮನಿ, ನಾಗನಗೌಡ ಪಾಟೀಲ, ಸತೀಶ ಬಣಕಾರ, ಶಂಕ್ರಗೌಡ ಮಕ್ಕಳ್ಳಿ, ಫಕ್ಕೀರಗೌಡ ಸಣ್ಣಗೌಡ್ರ, ಬಸವರಾಜ ಬಣಕಾರ, ಪರಮೇಶಪ್ಪ ಯಡಚಿ, ಹೂವನಗೌಡ ಮಳವಳ್ಳಿ, ಮಹೇಶ ಕೊಟ್ಟೂರ, ಮಲ್ಲನಗೌಡ ಮಾಳಗಿ ಮೊದಲಾದವರು ಹಾಜರಿದ್ದರು.
ತಹಸೀಲ್ದಾರ ಸಿ.ಡಿ.ಗೀತಾ ಮನವಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.