ADVERTISEMENT

ಬರಗಾಲ: ತುರ್ತು ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ಪಾಂಡವಪುರ: ಬರಪೀಡಿತ ಪ್ರದೇಶದ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸಲು ತುರ್ತು ಕ್ರಮ ಕೈಗೊಳ್ಳಲು ಎಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕೆಂದು  ತಹಶೀಲ್ದಾರ್ ಬಿ.ಸಿ.ಶಿವಾನಂದಮೂರ್ತಿ ಶನಿವಾರ ಸೂಚಿಸಿದರು.

ತಾಲ್ಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪರಿಸ್ಥಿತಿ ಎದುರಿಸಲು ಎರಡು ಗ್ರಾಮ ಪಂಚಾಯಿತಿಗಳಿಗೆ ಒಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ನೋಡಲ್ ಅಧಿಕಾರಿಗಳು ಒಂದು ವಾರದಲ್ಲಿ ಆಯಾ ಗ್ರಾ.ಪಂ.ವ್ಯಾಪ್ತಿಯ ಹಳ್ಳಿಗಳ ಸ್ಥಿತಿಗತಿ ಕುರಿತು ವರದಿ ನೀಡಬೇಕು. ನಂತರ ಪರಿಹಾರ ಕಾರ್ಯ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಜಿ.ಪಂ.ಸದಸ್ಯ ಎ.ಎಲ್.ಕೆಂಪೂಗೌಡ ಮಾತನಾಡಿ, ಮಳೆಯಾಶ್ರಿತ ಪ್ರದೇಶಗಳ ಜತೆಗೆ ಪಂಪ್‌ಸೆಟ್ ಆಶ್ರಿತ ಪ್ರದೇಶಗಳನ್ನು ಬರಪೀಡಿತಕ್ಕೆ ಸೇರಿಸಿಕೊಳ್ಳಬೇಕು ಎಂದರು.

ಶೇ 50ರಷ್ಟು ಬೆಳೆ ನಾಶವಾಗಿದ್ದರೆ ಮಾತ್ರ ಬೆಳೆ ಪರಿಹಾರ ನೀಡಬಹುದು. ಬರ ಪೀಡಿತ ಪ್ರದೇಶಗಳ ಜಾನುವಾರುಗಳಿಗೆ ಮೇವನ್ನು ಒದಗಿಸಬೇಕು ಎಂದು ಸಭೆ ತೀರ್ಮಾನಿಸಿತು. ತಾ.ಪಂ.ಸದಸ್ಯ ಕೆ.ಗೌಡೇಗೌಡರು, ಸರ್ಕಾರ ವೈಜ್ಞಾನಿಕವಾದ ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಜಿ.ಪಂ. ಸದಸ್ಯೆ ಮಂಜುಳ ಪರಮೇಶ್, ತಾ.ಪಂ. ಇಒ ಡಾ.ಎಂ.ವೆಂಕಟೇಶಪ್ಪ, ಅಧ್ಯಕ್ಷೆ ಎಂ.ಮಹಾಲಕ್ಷ್ಮಿ, ಉಪಾಧ್ಯಕ್ಷ ಶಾಮಣ್ಣ, ಸದಸ್ಯರಾದ ಶೈಲಜಾ, ವಿಜಯಾ ಪ್ರಕಾಶ್, ಲಲಿತಾ ಆನಂದ್, ಗಾಯಿತ್ರಿ, ಮಣಿಯಮ್ಮ, ಲಕ್ಷ್ಮಿ, ಯಶವಂತ್, ಪುಟ್ಟೇಗೌಡ, ರಾಮಕೃಷ್ಣ, ಸ್ವಾಮೀಗೌಡ, ಮತ್ತು ಅಧಿಕಾರಿಗಳಿದ್ದರು.
 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT