ವಿಜಾಪುರ: `ಬರ ಪೀಡಿತ ಜನತೆಯ ಸಂಕಷ್ಟಗಳಿಗೆ ಸ್ಪಂದಿಸುವ ವಿಚಾರವಾಗಿ ಕನ್ನಡ ಚಿತ್ರ ತಂಡ, ಹಿರಿಯ ಕಲಾವಿದ ಅಂಬರೀಷ್ ಹಾಗೂ ಫಿಲಂ ಚೇಂಬರ್ ಜೊತೆಗೆ ಚರ್ಚಿಸುತ್ತೇನೆ. ವೈಯಕ್ತಿಕವಾಗಿ ನೆರವು ನೀಡಲು ನಾನು ಸಿದ್ಧ~ ಎಂದು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹೇಳಿದರು.
`ಶಿವಾ~ ಚಲನಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ನಗರದಲ್ಲಿ ಬೀಡುಬಿಟ್ಟಿರುವ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
`ಈ ಭಾಗದಲ್ಲಿ ಬರ ತೀವ್ರವಾಗಿರುವುದು ಇಲ್ಲಿಗೆ ಬಂದ ನಂತರ ನಮ್ಮ ಗಮನಕ್ಕೆ ಬಂದಿದೆ. ಜನತೆಯ ಸಮಸ್ಯೆಗಳಿಗೆ ಸಂಬಂಧಪಟ್ಟವರು ಪರಿಹಾರ ಹುಡುಕಬೇಕು. ಒಳ್ಳೆಯ ಕೆಲಸಕ್ಕೆ ಮನವಿ ಮಾಡುವುದು ತಪ್ಪಲ್ಲ. ಈ ವಿಷಯವಾಗಿ ನಾನೂ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ~ ಎಂದರು.
`ಪಾಲಿಗೆ ಬಂದದ್ದು ಪಂಚಾಮೃತ. ಬರವನ್ನು ದಿಟ್ಟವಾಗಿ ಎದುರಿಸಬೇಕು. ಯಾರೂ ಧೈರ್ಯ ಕಳೆದು ಕೊಳ್ಳಬಾರದು. ಎಲ್ಲರೂ ಬದುಕಿನಲ್ಲಿ ನಂಬಿಕೆ ಇಡಬೇಕು. ಮಳೆ ಬಂದೇ ಬರುತ್ತದೆ. ನಿರಾಶರಾಗಿ ಯಾರೂ ಜೀವ ಕಳೆದುಕೊಳ್ಳುವ ಯತ್ನ ಮಾಡಬಾರದು~ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.