ADVERTISEMENT

ಬಾಡದಲ್ಲಿ ಕಮಾನು ಕುಸಿತ, ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 19:30 IST
Last Updated 6 ಜುಲೈ 2012, 19:30 IST
ಬಾಡದಲ್ಲಿ ಕಮಾನು ಕುಸಿತ, ಇಬ್ಬರ ಸಾವು
ಬಾಡದಲ್ಲಿ ಕಮಾನು ಕುಸಿತ, ಇಬ್ಬರ ಸಾವು   

ಹಾವೇರಿ: ಕನಕದಾಸರ ಹುಟ್ಟೂರು ಶಿಗ್ಗಾವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸುತ್ತಿದ್ದ ಮಹಾದ್ವಾರ (ಕಮಾನು) ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟು, ಒಂಬತ್ತಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಮೃತರನ್ನು ಕೊಪ್ಪಳದ ಬಸವರಾಜ ನೀಲಿ (26) ಹಾಗೂ ಹುಬ್ಬಳ್ಳಿಯ ಸಲೀಂ  (23) ಎಂದು ಗುರುತಿಸಲಾಗಿದೆ.

ಗಾಯಗೊಂಡರವನ್ನು ಹಾವೇರಿಯ ಕಾಂತೇಶ ಮೂರ್ತೆಪ್ಪ ಯಲಿಗಾರ, ಆಂಜನೇಯ ಬಂಡಿವಡ್ಡರ, ನಾಗರಾಜ ರಾಮಣ್ಣ ಸಾಯಿಕೊಪ್ಪ, ಬಾಗಲಕೋಟೆಯ ಬಸವರಾಜ ಸಂಕಪ್ಪ ತೋಟದ, ಗುಡಗೇರಿಯ ಫಕ್ಕೀರಗೌಡ ಜೀವನಗೌಡ ಕೊಪ್ಪದ ಎಂದು ಗುರುತಿಸಲಾಗಿದೆ.

ಗಾಯಾಳುಗಳಿಗೆ ಸಂಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ `ಕಿಮ್ಸ~ಗೆ ಸಾಗಿಸಲಾಗಿದೆ. ನಾಲ್ವರು ಶಿಗ್ಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಸುಮಾರು 35-40 ಅಡಿ ಎತ್ತರದ ಕಮಾನು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ. ಅದರ ಮೇಲ್ಛಾವಣಿಗೆ ಕಾಂಕ್ರೀಟ್ ಹಾಕುವ ಸಂದರ್ಭದಲ್ಲಿ ಕುಸಿದು ಬಿತ್ತು. ಈ ವೇಳೆ 11 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಣ್ಣು ಹಾಗೂ ಕಾಂಕ್ರೀಟ್ ಕಂಬಗಳ ಅಡಿ ಸಿಕ್ಕಿಕೊಂಡು ಇಬ್ಬರು ಸತ್ತರೆ, 9 ಮಂದಿ ಗಾಯಗೊಂಡಿದ್ದಾರೆ.

ಕಾರ್ಯಾಚರಣೆ: ಶಿಗ್ಗಾವಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಜೆಸಿಬಿ ಯಂತ್ರದಿಂದ ಕಾರ್ಯಾಚರಣೆ ನಡೆಸಿ ಅವಶೇಷಗಳ ಅಡಿಯಲ್ಲಿ ಸಿಕ್ಕಿ ಹಾಕಿಕೊಂಡ ಕಾರ್ಮಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.